ಶಾಸಕರು ರಾಜೀನಾಮೆ ಕೊಟ್ರೂ ಸರ್ಕಾರ ಸುರಕ್ಷಿತ

ಶಾಸಕರ ರಾಜೀನಾಮೆಯಿಂದ ಶೆಟ್ಟರ್ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿಲ್ಲ. ವಿಧಾನಸಭೆಯ ಬಲಾಬಲವನ್ನು ನೋಡಿದರೆ, ಬಿಜೆಪಿ ಸರರ್ಕಾರದ ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂಬುದಂತೂ ಸ್ಪಷ್ಟ.
ಬಿಜೆಪಿಯ ಶಾಸಕ ಮತ್ತು ಸಚಿವ ಸ್ಥಾನಕ್ಕೆ ಗುರುವಾರ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಸುರಪುರ ಶಾಸಕ, ಸಣ್ಣ ಕೈಗಾರಿಕಾ ಸಚಿವ ರಾಜುಗೌಡ (ನರಸಿಂಹನಾಯಕ್) ಸಹ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಎರಡು ದಿನಗಳಲ್ಲಿ ರಾಜೀನಾಮೆ ನೀಡಬಹುದು. ವಿಧಾನಸಭೆಯ ಬಲಾಬಲದ ಪ್ರಕಾರ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು 103 ಸ್ಥಾನಗಳು ಬೇಕು.
224 ಬಲದ ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಇತ್ತೀಚೆಗೆ ಕೆಜೆಪಿ ಸೇರಿದ 12 ಮಂದಿ ಮತ್ತು ಫೆ.18ರ ಸೋಮವಾರ ಜೆಡಿಎಸ್ ತೊರೆದ ಶ್ರವಣಬೆಳಗೊಳ ಶಾಸಕ ಸಿ.ಎಸ್.ಪುಟ್ಟೇಗೌಡ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 71, ಜೆಡಿಎಸ್ 25 ಶಾಸಕರನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ ಪರ 105 ಶಾಸಕರಿದ್ದಾರೆ. ಸ್ಪೀಕರ್ ಮತ್ತು ನಾಮ ನಿರ್ದೇಶಿತ ಸದಸ್ಯರನ್ನು ಸೇರಿಸಿದರೆ ಬಿಜೆಪಿ ಪರ 107 ಶಾಸಕರ ಬಲವಿದೆ.
ಮೂವರು ಸಚಿವರು, ಇಬ್ಬರು ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸಂಖ್ಯಾಬಲ 102ಕ್ಕೆ ಕುಸಿಯಲಿದೆ. ಸದನದಲ್ಲಿ ಏಳು ಪಕ್ಷೇತರರು ಇದ್ದಾರೆ. ಇವರಲ್ಲಿ ಕೋಲಾರ ಶಾಸಕ ವರ್ತೂರು ಪ್ರಕಾಶ್ ಸಚಿವರಾಗಿದ್ದಾರೆ.
ಆದ್ದರಿಂದ ಸಂಖ್ಯಾಬಲ 103ಕ್ಕೆ ಏರಲಿದೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದರೂ ವಿರೋಧಿಗಳ ಸಂಖ್ಯಾಬಲ ಕೇವಲ 102 ಆಗುತ್ತದೆ. ಆದ್ದರಿಂದ ಶೆಟ್ಟರ್ ಸರ್ಕಾರ ಯಾವುದೇ ಸಂಖ್ಯಾಬಲ ಕೊರತೆ ಇಲ್ಲದೆ ಸುಭದ್ರವಾಗಿರುತ್ತದೆ.












Click it and Unblock the Notifications