ಬಂದ್ ಪ್ರಾರಂಭ ರಸ್ತೆಗಿಳಿದಿವೆ ಬಿಎಂಟಿಸಿ

ಬಹುತೇಕ ಬಸ್ ಗಳಲ್ಲಿ ಪ್ರಯಾಣಿಕರ ಕೊರತೆ ಇದೆ. ಕೆಲವು ಬಸ್ ಗಳಲ್ಲಿ ಚಾಲಕ ಮತ್ತು ನಿರ್ವಾಹಕರೆ ಪ್ರಯಾಣಿಕರು ಎಂಬಂತಹ ಪರಿಸ್ಥಿತಿ ಇದೆ. ಬೆಳಗ್ಗೆ 11 ಗಂಟೆಯ ನಂತರ ಬಸ್ ಗಳ ಸಂಚಾರ ಸ್ಥಗಿತಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಬಸ್ ಏರುವ ಪ್ರಯಾಣಿಕರಿಗೆ ಚಾಲಕರು ಗಲಾಟೆ ನಡೆದರೆ ಅಲ್ಲೇ ಬಸ್ ನಿಲ್ಲಿಸುತ್ತೇವೆ ಎಂಬ ಷರತ್ತು ವಿಧಿಸುತ್ತಿದ್ದಾರೆ.
ಆಟೋಗಳು ರಸ್ತೆಗಿಳಿದಿವೆ : ಆಟೋ ಚಾಲಕರ ಸಂಘ ಫೆ.20 ಮತ್ತು 21 ಎರಡು ದಿನವೂ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರು. ಆದರೂ, ಹಲವಾರು ಆಟೋಗಳು ರಸ್ತೆಗಳಿದಿವೆ. ಬಸ್ ಗಳು ಇರುವುದಿಲ್ಲ. ಒಳ್ಳೆಯ ದುಡಿಮೆ ಮಾಡಬಹುದು ಎಂದು ಆಲೋಚಿಸಿದ್ದ ಆಟೋ ಚಾಲಕರಿಗೆ ಬಿಎಂಟಿಸಿ ಬಸ್ ಗಳು ಶಾಕ್ ನೀಡಿವೆ.
ಕೆಎಸ್ಆರ್ ಟಿಸಿ ನೌಕರರು ಬಂದ್ ಗೆ ಬೆಂಬಲ ನೀಡಿದ್ದರು. ಮುಂಜಾನೆ 8 ಗಂಟೆಯಿಂದ 323 ಬಸ್ ಗಳು ಸಂಚಾರ ನಡೆಸಬೇಕಾಗಿತ್ತು. ಆದರೆ ಇದುವರೆಗೂ ಕೇವಲ 90 ಬಸ್ ಗಳು ಮಾತ್ರ ಮೆಜೆಸ್ಟಿಕ್ ನಿಂದ ಹೊರಟಿವೆ. ಪರಿಸ್ಥಿತಿಯ ಅವಲೋಕನ ಮಾಡಿ ನಂತರ ಬಸ್ ಸಂಚಾರದ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಕೆಎಸ್ಆರ್ ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿ ಬೆಳಗ್ಗೆ 11 ಗಂಟೆಯ ನಂತರ ವಿವಿಧ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿವೆ. ಆ ಸಮಯದಲ್ಲಿ ಆಟೋ ಮತ್ತು ಬಸ್ ಸಂಚಾರ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ. ಖಾಸಗಿ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಿರುವುದರಿಂದ ಶಾಲಾ ವಾಹನಗಳ ಸಂಚಾರ ಬಂದ್ ಆಗಿದೆ.
ಸದಾ ಜನರಿಂದ ತುಂಬಿ ತುಳುಕುತ್ತಿದ್ದ ನಗರದ ಕೆ.ಆರ್.ಮಾರುಕಟ್ಟೆ ಬಂದ್ ನಿಂದ ಸಂಪೂರ್ಣ ಸ್ತಬ್ಧವಾಗಿದೆ. ಬಹುತೇಕ ಅಂಗಡಿ ಬಾಗಿಲು ಮುಚ್ಚಿವೆ. ಹೂವಿನ ವ್ಯಾಪಾರಿಗಳು ಎಂದಿನಂತೆ ಪುಟ್ ಪಾತ್ ಮೇಲೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಆದರೆಮ ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ.
ಖಾಕಿ ಸರ್ಪಗಾವಲು: ಬಿಎಂಟಿಸಿ ಬಸ್ ನಿಲ್ದಾಣ, ಪ್ರಮುಖ ಸರ್ಕಲ್ ಗಳಲ್ಲಿ ಖಾಕಿ ಸರ್ಪಗಾವಲು ಕಂಡು ಬರುತ್ತಿದೆ. ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications