ನಾನೂ ಭಾವಿ ಪ್ರಧಾನ ಮಂತ್ರಿಯೇ!
ನಾಗಪುರ, ಫೆ.18: ಯಾರು ಯಾರು ಈ ದೇಶದ ಪ್ರಧಾನ ಮಂತ್ರಿಯ ಕುರ್ಚಿ ಮೇಲೆ ಟವಲ್ ಹಾಕುತ್ತಾರೋ ಗೊತ್ತಿಲ್ಲ. ಕಳೆದ ವಾರ 40 ಜಯಗಳನ್ನು ತಂದು ಕೊಡಿ, ರಾಜ್ಯದ ಹಿತಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಪಕ್ಕದ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಅವರು ಹೇಳಿದರಾದರೋ ಮನದೊಳಗಿನ ಇಂಗಿತವನ್ನು ಬಹಿರಂಗಪಡಿಸುತ್ತಾ ನಾನೂ ಪ್ರಧಾನಿಯಾಗಬಲ್ಲೆ ಎಂದು ಬಹಿರಂಗಗೊಳಿಸಲಿಲ್ಲ.
ಆದರೆ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಯಾವತಿ ಇದ್ದಾರಲ್ಲಾ ಅವರು ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ ನನಗೂ ಮುಂದಿನ ಪ್ರಧಾನ ಮಂತ್ರಿಯಾಗುವ ಬಯಕೆ/ಭರವಸೆಯಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಮೋದಿಯನ್ನು ಪ್ರಧಾನಿಯಾಗಲು ಬಿಡೋಲ್ಲ: 60 ವರ್ಷದ ಮಯಾವತಿ ಅವರು 4 ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಪ್ರಸ್ತುತ ಅವರು ರಾಜ್ಯ ಸಭೆ ಸದಸ್ಯೆ. ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 80 ಲೋಕಸಭೆ ಸ್ಥಾನಗಳು ಇವೆ. ಶತಾಯಗತಾಯ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿಯಾಗಲು ತಾನು ಬಿಡುವುದಿಲ್ಲ ಎಂದು ಮಾಯಾವತಿ ಅವರು ಇತ್ತೀಚೆಗೆ ಹೇಳಿರುವುದು ಗಮನಾರ್ಹ.
ಕೆಂಪುಕೋಟೆ ವೇದಿಕೆಯ ಪಡಿಯಚ್ಚು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಗೆ ಪ್ರಚಂಡ ಬಹುಮತ ದೊರೆತರೆ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನ ಮಂತ್ರಿಯಾಗಿ ನಾನೇ ಭಾಷಣ ಮಾಡುತ್ತೇನೆ ಎಂದು ಅವರು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು. ಕುತೂಹಲದ ವಿಷಯವೆಂದರೆ ಇದಕ್ಕೆ ಪೂರ್ವತಯಾರಿಯೋ ಎಂಬಂತೆ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಭಾಷಣ ಮಾಡುವ ವೇದಿಕೆಯ ಪಡಿಯಚ್ಚಿನಂತೆ ತಾವು ನಿಂತು ಮಾತನಾಡಿದ ವೇದಿಕೆಯನ್ನೂ ಸಿದ್ಧಪಡಿಸಿಕೊಂಡಿದ್ದರು!
'ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಮಯದಲ್ಲಿ ನಿಮ್ಮನ್ನು ಭ್ರಷ್ಟರನ್ನಾಗಿ ಮಾಡಲು ಯತ್ನಿಸುವ ಶಕ್ತಿಗಳ ವಿರುದ್ಧ ಜಾಗೃತರಾಗಿರಿ. ಮಾರಾಟದ ವಸ್ತು ಆಗಬೇಡಿ' ಎಂದು ಲಂಚದ ವಿರುದ್ಧ ಮತ್ತು ಪಕ್ಷದ ಕಾರ್ಯಕರ್ತರ ಪರ ಕಳಕಳಿ ವ್ಯಕ್ತಪಡಿಸಿದರು.












Click it and Unblock the Notifications