ಲಿಂಗಾಯತ ಮಠಗಳಿಗೆ ಶೆಟ್ಟರ್ ಅಗ್ರತಾಂಬೂಲ
ಬೆಂಗಳೂರು, ಫೆ. 8 : ಮೊದಲ ಬಾರಿ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಮತ್ತು ಲಿಂಗಾಯತ ಜನಾಂಗದ ನಾಯಕ ಜಗದೀಶ್ ಶೆಟ್ಟರ್ ಅವರು ನಿರೀಕ್ಷೆಯಂತೆ ಲಿಂಗಾಯತ ಮಠಗಳಿಗೆ ಭಾರೀ ಅನುದಾನವನ್ನು ನೀಡಿದ್ದು, ಸರಿಯಾಗಿಯೇ ಚುನಾವಣೆಯ ದಾಳವನ್ನು ಉರುಳಿಸಿದ್ದಾರೆ. ಮಠಗಳಿಗೆ ಒಟ್ಟು 135 ಕೋಟಿ ರು. ಮೀಸಲಿಡಲಾಗಿದೆ.
ರಾಜ್ಯದ ರಾಜಕೀಯ ಶಕ್ತಿ ಕೇಂದ್ರವಾಗಿರುವ ಮಠಗಳಿಗೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಕೂಡ ಸಿಂಹಪಾಲು ಲಭಿಸಿದೆ. ಈ ಹಿಂದೆ, ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಇದು ಸಾಮಾನ್ಯ ಬಜೆಟ್ ಆಗಿರದೆ ಚುನಾವಣಾ ಬಜೆಟ್ ಆಗಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಇರುವಾಗ ಮತ್ತು ಶೆಟ್ಟರ್ ಅವರ ಸರಕಾರದ ಬುಡ ಅಲುಗಾಡುತ್ತಿರುವಾಗ ಶೆಟ್ಟರ್ ಅವರಿಂದ ಇಂಥ ಬಜೆಟ್ ನಿರೀಕ್ಷಿತವೇ ಆಗಿತ್ತು. ಈ ಬಜೆಟ್ಟಿಗೆ ವಿರೋಧ ಪಕ್ಷಗಳು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಊಹಿಸುವುದು ಅಸಾಧ್ಯವೇನಲ್ಲ. ಅದಿರಲಿ, ಮಠಗಳಿಗೆ ಎಷ್ಟೆಷ್ಟು ಸಿಕ್ಕಿದೆ ಎಂಬುದನ್ನು ನೋಡೋಣ.
ಆ ವಿವರಗಳು ಕೆಳಗಿನಂತಿವೆ :
* ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ 2 ಕೋಟಿ ರು.
* ಕೆಂಗೇರಿ ಬಸವ ಸಂಗಮ ಸಿದ್ದಗಂಗಾ ಮಠಕ್ಕೆ 5 ಕೋಟಿ ರು.
* ಮಡಿವಾಳ ಮಾಚಯ್ಯ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರು.
* ಮಲೆಮಹದೇಶ್ವರ ಆಧ್ಯಾತ್ಮ ಭವನಕ್ಕೆ 5 ಕೋಟಿ ರು.
* ವೀರಶೈವ ಲಿಂಗಾಯತ ಜಗದ್ಗುರು ಹರಿಹರ ಪೀಠಕ್ಕೆ 2 ಕೋಟಿ ರು.
* ಚಿತ್ರದುರ್ಗ ಮುರುಘಾಮಠ ಅನ್ನದಾಸೋಹಕ್ಕೆ 2 ಕೋಟಿ ರು.
* ಕೂಡಲ ಸಂಗಮ ಅಭಿವೃದ್ಧಿಗೆ 2 ಕೋಟಿ ರು.
* ಶಿರಸಿಯ ಸ್ವರ್ಣವಲ್ಲಿ ಮಠಕ್ಕೆ 2 ಕೋಟಿ ರು.
* ದಾವಣಗೆರೆ ವಿರಕ್ತ ಮಠದ ಜೀರ್ಣೋದ್ಧಾರಕ್ಕೆ 5 ಕೋಟಿ ರು.
* ಮುಳಗುಂದದ ಶಿವಯೋಗಿ ಮಠಕ್ಕೆ 2 ಕೋಟಿ ರು.
* ಹಿರೇಕೆರೂರಿನ ಸರ್ವಜ್ಞ ಪೀಠಕ್ಕೆ 1 ಕೋಟಿ ರು.
* ಸುತ್ತೂರಿನ ವಿಜ್ಞಾನ ಕೇಂದ್ರಕ್ಕೆ 5 ಕೋಟಿ ರು. [ಕರ್ನಾಟಕ ಬಜೆಟ್ 2013-14 : ಮುಖ್ಯಾಂಶ]