ಮೇ 20, 23ರಂದು ಕರ್ನಾಟಕ ವಿಧಾನಸಭೆ ಚುನಾವಣೆ

ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರದಲ್ಲಿನ 14 ಶಾಸಕರು ಪಕ್ಷ ತೊರೆದು ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರಿರುವ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅವಧಿಗಿಂತ ಮೊದಲೇ ನಡೆಯುವುದಾ ಎಂಬ ಪ್ರಶ್ನೆ ಉದ್ಭವವಾಗಿತ್ತು.
ಕೇಂದ್ರ ಚುನಾವಣಾ ಆಯೋಗ ಅನೌಪಚಾರಿಕವಾಗಿ ಭೇಟಿಯಾಗಿ, ಎಲ್ಲ ಸಾಧ್ಯಾಸಾಧ್ಯತೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಮೇಲೆ ತಿಳಿಸಿದ ದಿನಾಂಕಗಳಂದು ಚುನಾವಣೆ ನಡೆಸಲು ತಾತ್ವಿಕವಾಗಿ ನಿರ್ಧರಿಸಿದೆ. ಈ ಕುರಿತು ಚುನಾವಣಾ ಆಯೋಗ ಮಾರ್ಚ್ ಮೊದಲ ವಾರ ಮತ್ತೊಮ್ಮೆ ಔಪಚಾರಿಕವಾಗಿ ಭೇಟಿಯಾಗಿ, ಮಾರ್ಚ್ 10ರಂದು ಚುನಾವಣೆ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಎಸ್.ಆರ್. ಚಿಕ್ಕಮಠ ಅವರು ಆಯೋಗದ ಉಪಾಯುಕ್ತರನ್ನು ಭೇಟಿ ಮಾಡಿ, ಕರ್ನಾಟಕದಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಿವರ ನೀಡಿದ್ದಾರೆ. ರಾಜ್ಯದಲ್ಲಿ ನಡೆಯಬೇಕಾಗಿರುವ ಸ್ಥಳೀಯ ಚುನಾವಣೆ ಕುರಿತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಇನ್ನೇನು ಬರಲಿದ್ದು, ಸ್ಥಳೀಯ ಚುನಾವಣೆ ದಿನಾಂಕ ನಿಗದಿಯಾದ ಮೇಲೆ ವಿಧಾನಸಭೆ ಚುನಾವಣೆಯ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗುತ್ತಿದೆ.
ಅಲ್ಲದೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳು, ಹಬ್ಬಹರಿದಿನ, ಮಳೆಗಾಲವನ್ನು ಪರಿಗಣನೆಗೆ ತೆಗೆದುಕೊಂಡು ಮೇ 20ರ ನಂತರ ವಿಧಾನಸಭೆ ಚುನಾವಣೆ ನಡೆಸುವುದು ಪ್ರಶಸ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅಂತಿಮ ದಿನಾಂಕ ಮಾರ್ಚ್ ಎರಡನೇ ವಾರದಲ್ಲಿ ಹೊರಬೀಳಲಿದೆ.












Click it and Unblock the Notifications