ಬೆಂಗಳೂರು : ವೈದ್ಯನ ನಿರ್ಲಕ್ಷ್ಯದಿಂದ ಮಗು ಸಾವು
ಮೂರು ವರ್ಷದ ಗಂಡು ಮಗು ಶಿರೀಶ್ ಮೃತಪಟ್ಟ ದುರ್ದೈವಿ. ಎಚ್ಎಸ್ಆರ್ ಬಡಾವಣೆಯಲ್ಲಿ ಅಣ್ಣಯ್ಯ ದಂತ ಚಿಕಿತ್ಸಾಲಯ ನಡೆಸುತ್ತಿರುವ ಡಾ. ರವಿರಾಜ್ ಹೊಡೆತ ತಿಂದಿರುವ ವೈದ್ಯ. ಹೆಚ್ಚಿನ ಚಿಕಿತ್ಸೆಗೆಂದು ತರುವಾಗಲೆ ಮಗು ಮೃತಪಟ್ಟಿದೆ ಎಂದು ಗಾರ್ಡನ್ ಸಿಟಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಶಿರೀಶ್ನ ಪಾಲಕರಾದ ಲೋಕೇಶ್ ಮತ್ತು ಆಶಾ ಎಂಬುವವರು ಹಲ್ಲಿನ ಚಿಕಿತ್ಸೆಗೆಂದು ಎಚ್ಎಸ್ಆರ್ ಲೇಔಟಿನಲ್ಲಿರುವ ಅಣ್ಣಯ್ಯ ಕ್ಲಿನಿಕ್ಕೆಗೆ ಕರೆದುಕೊಂಡು ಹೋಗಿದ್ದರು. ಮಗು ಹಟಮಾಡುತ್ತಿದ್ದರಿಂದ ಡಾ. ರವಿರಾಜ್ ಅನಸ್ತೀಶಿಯಾ ನೀಡಿದ್ದಾರೆ. ಅನಸ್ತೀಶಿಯಾ ಪ್ರಮಾಣ ಹೆಚ್ಚಾಗಿದ್ದರಿಂದ ಮಗುವಿನ ಆರೋಗ್ಯ ಏರುಪೇರಾಗಿದೆ. ಹೆದರಿದ ಡಾ.ರವಿರಾಜ್ ಮಗುವನ್ನು ಗಾರ್ಡನ್ ಸಿಟಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಗು ಮೃತಪಟ್ಟಿದೆ.
ಶಿರೀಶ್ನ ತಾಯಿ ಹೇಳುವುದೇನೆಂದರೆ, ಮಗುವಿಗೆ ಅಧಿಕ ಪ್ರಮಾಣದಲ್ಲಿ ಅನಸ್ತೀಶಿಯಾ ನೀಡಿದ್ದರಿಂದಲೇ ಮಗು ಮೃತಪಟ್ಟಿದೆ. ಸುಮಾರ್ ಒಂದೂವರೆ ಗಂಟೆಗಳ ಕಾಲ ಮಗುವಿನ ಆರೋಗ್ಯದ ಸ್ಥಿತಿಯನ್ನು ತಮಗೆ ತಿಳಿಸದೆ ಕಡೆಗಳಿಗೆಯಲ್ಲಿ ಮಗುವನ್ನು ಗಾರ್ಡನ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತೆಂದು ಅವರು ಆರೋಪಿಸುತ್ತಾರೆ.
ವೈದ್ಯರು ಹೇಳುವುದೇನೆಂದರೆ, ಅನಸ್ತೀಶಿಯಾ ನೀಡಿದ ಕೂಡಲೆ ಮಗು ವಾಂತಿ ಮಾಡಿಕೊಂಡಿದೆ. ಆದರೆ, ವಾಂತಿಯನ್ನು ಮಗು ನುಂಗಿದ್ದರಿಂದ ಉಸಿರುಗಟ್ಟಿ ಒದ್ದಾಡಲು ಪ್ರಾರಂಭಿಸಿದೆ. ಕ್ಲಿನಿಕ್ಕಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸಲಕರಣಗಳು ಇಲ್ಲದ್ದರಿಂದ ಗಾರ್ಡನ್ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮಗು ಅಸುನೀಗಿದೆ.
ಮಗು ಶಿರೀಶ್ ಸತ್ತಿರುವುದು ತಿಳಿಯುತ್ತಿದ್ದಂತೆ ಅಣ್ಣಯ್ಯ ಆಸ್ಪತ್ರೆಗೆ ನುಗ್ಗಿದ ಸಂಬಂಧಿಕರು ವೈದ್ಯನ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಪೋಸ್ಟ್ ಮಾರ್ಟಂಗೆ ಕರೆದೊಯ್ಯಲಾಗಿದ್ದು, ಗುರುವಾರ ವರದಿ ಬರುವ ನಿರೀಕ್ಷೆಯಿದೆ. ಮಡಿವಾಳ ಪೊಲೀಸರು ಡಾ.ರವಿರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.