ಬಿಜೆಪಿ 130 ಸ್ಥಾನ ಗೆಲ್ಲಲಿದೆ : ಕೆಎಸ್ ಈಶ್ವರಪ್ಪ

ಬಜೆಟ್ ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಈಗಾಗಲೇ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ, ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಎಲ್ಲಾ ಕಡೆ ಗೆಲ್ಲುವ ವ್ಯಕ್ತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಚುನಾವಣೆಯನ್ನು ಸಂಘಟನೆ ಮೂಲಕ ಎದುರಿಸಲಾಗುತ್ತಿದ್ದು, ಸಂಘಟನೆ ಮುಖಾಂತರ ಸರ್ಕಾರ ರಚನೆ ಮಾಡಲಾಗುವುದು. ಪಕ್ಷದಲ್ಲಿ ಕೆಲ ಸಮಸ್ಯೆಗಳಿರುವುದು ಸರ್ವೆ ಸಾಮಾನ್ಯ. ವಿರೋಧ ಪಕ್ಷಗಳಲ್ಲಿ ದಿನದಿಂದ ದಿನಕ್ಕೆ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನವರ ಪಾದಯಾತ್ರೆ ಈಗಲೇ ಆರಂಭಿಸಿದ್ದು ಒಳ್ಳೆಯದಾಯ್ತು. ಜನರಿಗೆ ಕಾಂಗೆಸ್ ನಿಜ ಬಣ್ಣ ಮೊದಲೇ ತಿಳಿಯುತ್ತದೆ. ಪಾದಯಾತ್ರೆ ಫ್ಲಾಪ್ ಶೋ ಆಗಿದೆ. ಆದರೂ, ರಾಜ್ಯದಲ್ಲಿ ಬಿಜೆಪಿಗೆ ಎಂದಿದ್ದರೂ ಕಾಂಗ್ರೆಸ್ ಮಾತ್ರ ಎದುರಾಳಿ.
ಪ್ರಾದೇಶಿಕ ಪಕ್ಷಗಳು ಎಷ್ಟೇ ಪ್ರಯತ್ನ ಪಟ್ಟರೂ ಬಿಜೆಪಿ ವಿರುದ್ಧ ಸೆಣಸಾಟ ಅಸಾಧ್ಯ. ಬಿಜೆಪಿ ವಾಮಮಾರ್ಗವನ್ನು ಅನುಸರಿಸಿ ಅಭ್ಯರ್ಥಿಗಳಿಗೆ ಗಾಳ ಹಾಕುವುದಿಲ್ಲ. ಜನ ಪರ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಬಿಜೆಪಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗಲೂ ಜಗದೀಶ್ ಶೆಟ್ಟರ್ ಅವರು ಉತ್ತಮ ರಾಜ್ಯಭಾರ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಏಳಿಗೆಗಾಗಿ ಉತ್ತಮ ಬಜೆಟ್ ಮಂಡಿಸಲಿದ್ದಾರೆ. ಕೃಷಿ ಬಜೆಟ್ ರೈತರಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಿದೆ. ಜನರ ಆಶೋತ್ತರಕ್ಕೆ ತಕ್ಕಂತೆ ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸಿದೆ ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications