ನಿಮ್ಮ ಬೆಂಗಳೂರಿನ ಎಂಎಲ್ಎಗಳು ಎಂಥವ್ರು?
ಕರ್ನಾಟಕ ಮತ್ತೊಂದು ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದೆ. ಹಿಂದೆ ಆಯ್ಕೆಯಾದ ಜನಪ್ರತಿನಿಧಿಗಳು, ಹೊಸದಾಗಿ ರಾಜಕೀಯ ಸೇರಬಯಸುವ ಹುರಿಯಾಳುಗಳು ಮತದಾರರ ಮನೆಯ ಕದತಟ್ಟಲು ತವಕಿಸುತ್ತಿದ್ದಾರೆ. ಇದೇ ಸಮಯದಲ್ಲಿ ಪ್ರಜ್ಞಾವಂತ ಮತದಾರರು ಕೂಡ ತಾವು ಎದುರಿಸುತ್ತಿರುವ ಸಮಸ್ಯೆಗಳ ಸರಪಳಿ ಮಾಡಿಕೊಂಡು ಕಾದು ಕುಳಿತಿದ್ದಾರೆ.
ಕರ್ನಾಟಕ ರಾಜಕಾರಣದ ಕೇಂದ್ರಬಿಂದುವಾಗಿರುವ ಬೆಂಗಳೂರಿನಲ್ಲಿ ಒಟ್ಟು 27 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಜನಪ್ರತಿನಿಧಿಗಳ ಕುರಿತು ಬೆಂಗಳೂರಿನ ಜನತೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬ ಕುರಿತು ದಕ್ಷ ಸಂಸ್ಥೆ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಕಳೆದ ಡಿಸೆಂಬರ್ನಲ್ಲಿ ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ 1500 ಜನರನ್ನು ಸಂದರ್ಶಿಸಿ ಅವರ ಅಭಿಮತವನ್ನು ಸಂಗ್ರಹಿಸಲಾಗಿದೆ.
ಇಲ್ಲಿನ ರಾಜಕಾರಣಿಗಳಿಂದ ಜನರು ಏನೇನು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು? ಅವರಲ್ಲಿ ಎಷ್ಟು ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ? ಮುಂದಿನ ಚುನಾವಣೆಯ ನಂತರ ಎಂತೆಂಥ ಸಮಸ್ಯೆಗಳ ಪರಿಹಾರಕ್ಕೆ ಜನರು ಬೇಡಿಕೆ ಇಟ್ಟಿದ್ದಾರೆ? ಮತ ಹಾಕುವಾಗ ಎಂಥ ಅಂಶಗಳನ್ನು ಗಮನದಲ್ಲಿಟ್ಟು ಮತ ಚಲಾಯಿಸಲಿದ್ದಾರೆ? ಜನಪ್ರತಿನಿಧಿಗಳ ಇಲ್ಲಿಯವರೆಗಿನ ಸಾಧನೆ ತೃಪ್ತಿಕರವಾಗಿತ್ತಾ?
ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ಆಡಳಿತ, ಉದ್ಯೋಗ, ಕಸ ವಿಲೇವಾರಿ, ಕುಡಿಯುವ ನೀರು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜಕಾರಣಿಗಳ ಸಾಧನೆಯ ಮಾನದಂಡವಾಗಿ ಹತ್ತರಲ್ಲಿ ಅಂಕಿಗಳನ್ನು ನೀಡಲು ಜನರನ್ನು ಕೇಳಲಾಗಿತ್ತು. ಸಹಜವಾಗಿ ಯಾವ ಅಭ್ಯರ್ಥಿಯೂ ಫುಲ್ ಮಾರ್ಕ್ಸ್ ಪಡೆದಿಲ್ಲ.
ಸಮೀಕ್ಷೆಯ ಸಾರಾಂಶ ಇಲ್ಲಿದೆ

ನಿರೀಕ್ಷೆಗೂ ಸಾಧನೆಗೂ ಅಜಗಜಾಂತರ ವ್ಯತ್ಯಾಸ
ಈ ಬಾರಿಯಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುತ್ತಾನೆ ಎಂಬ ನಿರೀಕ್ಷೆ ಇಟ್ಟುಕೊಂಡೇ ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಜನರು ಚುನಾಯಿಸಿರುತ್ತಾರೆ? ಆದರೆ, ಒಬ್ಬರಾದರೂ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರಾ? ಇಲ್ಲ. ಅಂದ್ಕೊಂಡಿದ್ದೇ ಒಂದು ಆದಿದ್ದೇ ಇನ್ನೊಂದು ಎಂಬಂತಹ ನಿರಾಶೆಯೇ ಹಲವರಲ್ಲಿ ಮಡುಗಟ್ಟಿದೆ. ಒಟ್ಟಾರೆಯಾಗಿ 10ರಲ್ಲಿ ಅತಿ ಹೆಚ್ಚು ಅಂಕ ಬಂದಿರುವುದು 6.6 ಮಾತ್ರ.

ಕಾಡುತ್ತಿರುವ 6 ಪ್ರಮುಖ ಸಮಸ್ಯೆಗಳು
* ಸಾರ್ವಜನಿಕ ಜಾಗ, ಪಾರ್ಕ್, ಕೆರೆ ಒತ್ತುವರಿ
* ಉತ್ತಮ ಉದ್ಯೋಗ ಅವಕಾಶಗಳು
* ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ
* ಸಾರ್ವಜನಿಕ ಮೂತ್ರಾಲಯ, ನೀರು, ಪಾದಚಾರಿ ಮಾರ್ಗ
* ಹೆಚ್ಚು ಆಸ್ಪತ್ರೆ ಮತ್ತು ಸರಕಾರಿ ಆರೋಗ್ಯ ಕೇಂದ್ರಗಳು
* ಪ್ರಾಂತ್ಯಗಳ ಮೇಲಿನ ನಿಯಂತ್ರಣ

ಈ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನ
ಈ ಸಮಸ್ಯೆಗಳ ಬಗ್ಗೆ ಮತದಾರರು ತಲೆಯನ್ನೇ ಕೆಡಿಸಿಕೊಂಡಿಲ್ಲ. ಅವುಗಳೆಂದರೆ,
* ಕ್ಷೇತ್ರದ ಶಾಸಕನ ಸಂಪರ್ಕ
* ಶಾಸಕನ ನಂಬಿಕಾರ್ಹತೆ
* ವಾಹನ ನಿಲುಗಡೆ ವ್ಯವಸ್ಥೆ
* ಅತ್ಯುತ್ತಮ ರಸ್ತೆಗಳು
* ಚರಂಡಿ ವ್ಯವಸ್ಥೆ

ಸಮಸ್ಯೆಗಳು ವಯೋಮಾನಕ್ಕೆ ತಕ್ಕಂತೆ
18ರಿಂದ 30 : ಕೆರೆ, ರಸ್ತೆ, ಆಸ್ಪತ್ರೆ, ಉದ್ಯೋಗ, ಸಂಚಾರ ವ್ಯವಸ್ಥೆ, ಶಿಕ್ಷಣ
31ರಿಂದ 45 : ಕೆರೆ ಪುನರುಜ್ಜೀವನ, ರಸ್ತೆ, ಜಾಗ ಒತ್ತುವರಿ, ಉದ್ಯೋಗ
46ರಿಂದ 60 : ಕಸ ವಿಲೇವಾರಿ, ನೀರು ಸರಬರಾಜು, ಮೂಲಭೂತ ಸೌಕರ್ಯ
61ರಿಂದ ಮೇಲೆ : ರಸ್ತೆ, ಕೆರೆ, ಪಾರ್ಕ್ ಒತ್ತುವರಿ, ಶಿಕ್ಷಣದಲ್ಲಿ ಮೀಸಲಾತಿ

ಅಭ್ಯರ್ಥಿ ಮುಖ್ಯವೋ ಜಾತಿ ಮುಖ್ಯವೋ?
ಬೆಂಗಳೂರಿನ ಬಹುಪಾಲು ನಾಗರಿಕರ ಪ್ರಕಾರ, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಿಂತ ಆತ ಪ್ರತಿನಿಧಿಸುವ ಪಕ್ಷ ಮತ್ತು ಆತನ ಜಾತಿಯೇ ಮುಖ್ಯವಾಗುತ್ತದೆ. ಶೇ.41ರಷ್ಟು ಜನ ಜಾತಿ ಮುಖ್ಯ ಅಂದಿದ್ದರೆ, ಶೇ.18.7ರಷ್ಟು ಜನ ಪಕ್ಷಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ. ಆದರೆ, ಅಭ್ಯರ್ಥಿಯ ಆಯ್ಕೆಗೆ ಮತ ಬಿದ್ದಿರುವುದು ಶೇ.14.5ರಷ್ಟು ಮಾತ್ರ. ಆದ್ದರಿಂದ, ಅಭ್ಯರ್ಥಿ ಪ್ರಾಮಾಣಿಕ ಇರಲಿ, ಇಲ್ಲದಿರಲಿ, ಆತ ಪ್ರತಿನಿಧಿಸುವ ಜಾತಿಯೇ ಮತಹೂಡಿಕೆಗೆ ನಿರ್ಣಾಯಕವಾಗುತ್ತದೆ.

ಸದನದಲ್ಲಿ ಯಾರು ಎಷ್ಟು ಪ್ರಶ್ನೆ ಕೇಳಿದ್ದಾರೆ?
ಇಲ್ಲೊಂದು ಅಚ್ಚರಿಯ ಸಂಗತಿಯಿದೆ. 27 ಜನಪ್ರತಿನಿಧಿಗಳಲ್ಲಿ 4 ಜನರು ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. 7 ಜನರು 10ಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ್ದಾರೆ. 8 ಜನಪ್ರತಿನಿಧಿಗಳು 100ಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ್ದಾರೆ. 100ಕ್ಕಿಂತ ಹೆಚ್ಚು ಪ್ರಶ್ನೆ ಕೇಳಿದವರು 3 ಮಾತ್ರ. ಇಂಥವರಿಂದ ಎಂಥ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ? ಪ್ರಶ್ನೆಗಳನ್ನೇ ಕೇಳದ ಇವರು ಜನರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ?












Click it and Unblock the Notifications