ಪೀಣ್ಯ-ಮಲ್ಲೇಶ್ವರಂ ಮೆಟ್ರೋ ರೈಲು ರೆಡಿ
ಬೆಂಗಳೂರು, ಫೆ.4: ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಯೋಜನೆಯ ಪೀಣ್ಯ ಮತ್ತು ಮಲ್ಲೇಶ್ವರಂ ನಡುವಿನ 10.5 ಕಿಮೀ ವ್ಯಾಪ್ತಿಯ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಜೂನ್ ವೇಳೆಗೆ ಸಂಚಾರ ಆರಂಭವಾಗಲಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸೋಮವಾರ(ಫೆ.4) ಘೋಷಿಸಿದ್ದಾರೆ..
ಉಭಯ ಸದನಗಳನ್ನುದ್ದೇಶಿಸಿ ಸೋಮವಾರ ಭಾಷಣ ಮಾಡಿದ ರಾಜ್ಯಪಾಲ ಎಚ್ ಭಾರದ್ವಾಜ್ ಅವರು ಈ ವಿಷಯ ಪ್ರಸ್ತಾಪಿಸಿ, ಮೊದಲ ಹಂತದ 14 ಕಿಮೀ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ ಎಂದರು.
ಎರಡನೆ ಹಂತದ ಕಾಮಗಾರಿ ಪೂರ್ಣಗೊಂಡು ಜೂನ್ಗೆ ಕಾರ್ಯಾರಂಭ ಮಾಡುತ್ತದೆ. 26,405 ಕೋಟಿ ರೂ. ವೆಚ್ಚದ 72 ಕಿಮೀ ವ್ಯಾಪ್ತಿಯ ಎರಡನೆ ಹಂತದ ಬೆಂಗಳೂರು ಮೆಟ್ರೋ ಯೋಜನೆ ಅನುಮೋದನೆ ಹಂತದಲ್ಲಿದೆ ಎಂದು ಹೇಳಿದರು.
ಮಳೆ ನೀರು ಸಂಗ್ರಹವನ್ನು 40 ಸಾವಿರ ಕಟ್ಟಡಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಕಾವೇರಿ 4ನೆ ಹಂತದ 2ನೆ ಘಟ್ಟ ಯೋಜನೆಯನ್ನು ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ಜಾರಿಗೊಳಿಸಿದ್ದು, ಇದರಡಿ ನಗರಕ್ಕೆ 500 ಎಂಎಲ್ಡಿ ನೀರನ್ನು ಹೆಚ್ಚುವರಿಯಾಗಿ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ 17 ಕೆಳ ಸೇತುವೆ, ಫ್ಲೈ ಓವರ್ಗಳನ್ನು ನಿರ್ಮಿಸಲಾಗಿದೆ. 17 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. 150 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಜಿಐಎಸ್ ತಂತ್ರಜ್ಞಾನ ಬಳಸಿ ಆಸ್ತಿ ತೆರಿಗೆ ಸಂಗ್ರಹಣೆಗೆ 15 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಇದಲ್ಲದೆ, ಆಸ್ತಿ ಮಾಲೀಕತ್ವ ದಾಖಲೆ ಪರಿವರ್ತಿಸಲು ಬೆಂಗಳೂರು ನಗರ ಸೇರಿದಂತೆ ಇತರೆ ಐದು ನಗರಗಳಲ್ಲಿ ವಿನೂತನ ಯೋಜನೆ ಪ್ರಾರಂಭಿಸಲಾಗಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಮಹಾನಗರ ಪಾಲಿಕೆ ಅಭಿವೃದ್ಧಿಪಡಿಸಲು ತಲಾ 200 ಕೋಟಿ ರೂ.ಗಳನ್ನು ವಿಶೇಷ ಅನುದಾನವಾಗಿ ನೀಡಲಾಗುತ್ತದೆ. ಸಣ್ಣ ಮತ್ತು ಮಧ್ಯಮ ಪಟ್ಟಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ರಾಜ್ಯಸರ್ಕಾರದ ನಗರೋತ್ಥಾನ ಯೋಜನೆಯಡಿಯಲ್ಲಿ 3.5 ಸಾವಿರ ಕೋಟಿ ರೂ. ಒದಗಿಸಲಾಗಿದೆ ಎಂದು ಹಂಸರಾಜ್ ಭಾರದ್ವಾಜ್ ತಿಳಿಸಿದರು.