ಕಾವೇರಿ ವಿವಾದ: ಇಂದು ಮಹತ್ವದ ತೀರ್ಪು
ನವದೆಹಲಿ, ಜ. 28 : ತಮಿಳುನಾಡಿನ ಸಾಂಬಾ ಬೆಳೆಗಳಿಗಿಂತ ಕರ್ನಾಟಕದ ನೀರಿಲ್ಲದೆ ಪರದಾಡುತ್ತಿರುವ ಲಕ್ಷಾಂತರ ಜನರ ಕುಡಿಯುವ ನೀರಿಗಾಗಿ ಕಾವೇರಿ ನೀರನ್ನು ಹೆಚ್ಚಾಗಿ ಬಳಕೆ ಮಾಡಬೇಕಾದ ಅಗತ್ಯವಿದೆ ಎಂದು ಸೋಮವಾರ ಹೇಳಿರುವ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ನುಡಿದಿದ್ದು ತಮಿಳುನಾಡಿಗೆ ಭಾರೀ ಹಿನ್ನಡೆಯಾದಂತಾಗಿದೆ.
ಕಾವೇರಿ ನೀರು ಪ್ರಾಧಿಕಾರದ ಆಜ್ಞೆಯಂತೆ ಕಾವೇರಿ ನೀರನ್ನು ಹರಿಸಲು ಕರ್ನಾಟಕ ವಿಫಲವಾಗಿದ್ದು, ತಮಿಳುನಾಡಿಗೆ ಪರಿಹಾರ ಒದಗಿಸಬೇಕು ಎಂದು ತಮಿಳುನಾಡು ಸರಕಾರ ಜ.22ರಂದು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನಂತರ ಸರ್ವೋಚ್ಚ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಜನತೆಯ ಕುಡಿಯುವ ನೀರಿನ ಅಗತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ತಮಿಳುನಾಡಿನ ಬೆಳೆಗಳಿಗೆ ಕಾವೇರಿ ನೀರು ಬಿಡಬೇಕಿರುವುದು ಆನಂತರ ಎಂದು ನ್ಯಾಯಾಲಯ ಹೇಳಿದೆ. ಆದರೆ, ವಾರ್ಷಿಕವಾಗಿ ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರಿನ ಅಗತ್ಯವಿದೆ ಎಂಬ ಕುರಿತು ಹೇಳಿಕೆಯನ್ನು ಮಂಗಳವಾರ ಸಲ್ಲಿಸಬೇಕೆಂದು ರಾಜ್ಯಕ್ಕೆ ಆಜ್ಞೆ ಮಾಡಿದೆ.
ಮಂಗಳವಾರ: ಕಾವೇರಿ ನೀರು ಹಂಚಿಕೆ ವಿವಾದದ ಮುಂದವರಿದ ವಿಚಾರಣೆ ಇಂದು ಸುಪ್ರೀಂಕೋರ್ಟಿನಲ್ಲಿ ನಡೆಯಲಿದೆ. ಒಟ್ಟು ಕರ್ನಾಟಕ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು ಬಿಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನ ಬರುವ ನಿರೀಕ್ಷೆಯಿದೆ.

ಕರ್ನಾಟಕ ಆಯೋಗದ ತೀರ್ಪಿನಂತೆ ನೀರು ಬಿಡಲು ವಿಫಲವಾಗಿದ್ದರಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ. ನೀರಿನ ಕೊರತೆಯಿಂದಾಗಿ ಅಲ್ಪಾವಧಿಯ ಕುರುವೈ ಮತ್ತು ದೀರ್ಘಾವಧಿ ಬೆಳೆಯಾಗಿರುವ ಸಾಂಬಾ ಬೆಳೆಗೆ ಭಾರೀ ಹೊಡೆತ ಬಿದ್ದಿದೆ. ಇದಲ್ಲದೆ, ಥರ್ಮಲ್ ವಿದ್ಯುತ್ ಉತ್ಪಾದನೆಯೂ ಕುಂಠಿತವಾಗಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅರ್ಜಿಯಲ್ಲಿ ತಿಳಿಸಿದ್ದರು.
ಡಿಸೆಂಬರ್ವರೆಗೆ ಬಿಡಬೇಕಾಗಿದ್ದ 53.4 ಟಿಎಂಸಿ ಅಡಿ ನೀರು ಮತ್ತು ಮುಂದಿನ ಹದಿನೈದು ದಿನದೊಳಗೆ 30 ಟಿಎಂಸಿ ಅಡಿ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಮನವಿ ಸಲ್ಲಿಸಿದ್ದೆ. ಆದರೆ, ಕರ್ನಾಟಕ ಒಂದು ಹನಿಯನ್ನೂ ಬಿಟ್ಟಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ.
ಬೇಸಿಗೆ ಅಡಿಯಿಡುವ ಮೊದಲೇ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಕಾವೇರಿ ನೀರು ಸರಬರಾಜಾಗುವ ನಗರಗಳಲ್ಲಿ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನಮಗೇ ಕುಡಿಯಲು ನೀರಿಲ್ಲದಿರುವಾಗ ಬೆಳೆಗೆಲ್ಲಿ ನೀಡೋಣ ಎಂಬ ಕರ್ನಾಟಕದ ವಾದಕ್ಕೆ ಸುಪ್ರೀಂಕೋರ್ಟ್ ತಲೆದೂಗಿದೆ.












Click it and Unblock the Notifications