ಜ 28ಕ್ಕೆ ಮತ್ತೆ ನಾಲ್ಕು ಬಿಜೆಪಿ ಶಾಸಕರ ರಾಜೀನಾಮೆ?

ಸೋಮವಾರ (ಜ 28) ಮತ್ತೆ ನಾಲ್ವರು ಬಿಜೆಪಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಬಲವಾದ ಸುದ್ದಿ ಎರಡೂ ಪಕ್ಷದ ಪಡಶಾಲೆಯಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ಸ್ಪೀಕರ್ ಬೋಪಯ್ಯ ಅವರು ಸೋಮವಾರ ತಮ್ಮ ಕಚೇರಿಗೆ ಆಗಮಿಸಲಿದ್ದು, ಈಗಾಗಲೇ ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ 13 ಶಾಸಕರ ಜೊತೆ ಮತ್ತೆ ನಾಲ್ವರು ಶಾಸಕರು ಅಂದೇ ತಮ್ಮ ರಾಜೀನಾಮೆ ಪತ್ರವನ್ನು ಬೋಪಯ್ಯ ಅವರಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಇದೇ ರಾಜಕೀಯ ಲೆಕ್ಕಾಚಾರದಲ್ಲಿ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದೇ ಆದಲ್ಲಿ ರಾಜೀನಾಮೆ ನೀಡಿದವರ ಒಟ್ಟು ಸಂಖ್ಯೆ 17ಕ್ಕೆ ಏರಲಿದ್ದು, ಜಗದೀಶ್ ಶೆಟ್ಟರ್ ಸರಕಾರದ ಅಳಿವು ಉಳಿವಿನ ಪ್ರಶ್ನೆ ತೂಗೊಯ್ಯಾಲೆಯಲ್ಲಿ ಸಾಗಲಿದೆ.
ಮೂಲಗಳ ಪ್ರಕಾರ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಸೇರುವ ನಾಲ್ಕು ಶಾಸಕರು ಯಾರೆಂದರೆ:
ಸುನಿಲ್ ವಲ್ಯಾಪುರೆ - ಚಿಂಚೋಳಿ ಕ್ಷೇತ್ರ
ಶ್ರೀಶೈಲಪ್ಪ ಬಿದರೂರು - ಗದಗ ಕ್ಷೇತ್ರ
ಸಿ ಸಿ ಪಾಟೀಲ್ - ನರಗುಂದ ಕ್ಷೇತ್ರ
ರಾಮಚಂದ್ರ - ಜಗಳೂರು ಕ್ಷೇತ್ರ
ಈ ಮೇಲಿನ ನಾಲ್ಕೂ ಶಾಸಕರು ಈಗಾಗಲೇ ಯಡಿಯೂರಪ್ಪ ಅವರ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸೋಮವಾರ ಸ್ಪೀಕರ್ ಬೋಪಯ್ಯ ಕಚೇರಿಗೆ ಹಾಜರಾದರೆ ಮತ್ತೊಮ್ಮೆ ರಾಜಕೀಯ ಮೇಲಾಟ ಗರಿಗೆದರುವುದು ನಿಶ್ಚಿತ.












Click it and Unblock the Notifications