ರಾಜೀನಾಮೆ ನೀಡುವಂತೆ ಉದಾಸಿಗೆ ಯಡಿಯೂರಪ್ಪ ಆದೇಶ

ಲೋಕೋಪಯೋಗಿ ಸಚಿವ ಸಿ ಎಂ ಉದಾಸಿಯವರಿಗೆ ನಾಳೆ (ಜ 23) ರಾಜೀನಾಮೆ ನೀಡಲು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟ ಆದೇಶ ನೀಡಿದ್ದಾರೆಂದು ಖಚಿತ ಮೂಲಗಳಿಂದ ವರದಿಯಾಗಿದೆ.
ಶೋಭಾ ಕರಂದ್ಲಾಜೆ ಮತ್ತು ಉದಾಸಿ ಬುಧವಾರ (ಜ 23) ರಾಜೀನಾಮೆ ನೀಡುವುದು ಖಚಿತವಾಗಿದೆ. ಆದರೆ ಇನ್ನಿಬ್ಬರು ಕ್ಯಾಬಿನೆಟ್ ಸಚಿವರುಗಳಾದ ರೇಣುಕಾಚಾರ್ಯ ಮತ್ತು ಮುರುಗೇಶ್ ನಿರಾಣಿ ನಾಳೆ ರಾಜೀನಾಮೆ ನೀಡುವುದು ಅನಿಶ್ಚತೆಯಲ್ಲಿದೆ.
ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಸಿಎಂ ಶೆಟ್ಟರ್ ನಾಳೆ ಉದ್ಘಾಟಿಸಲಿರುವುದರಿಂದ ಮುರುಗೇಶ್ ನಿರಾಣಿ ಮತ್ತು ಹೊನ್ನಾಳಿಯಲ್ಲಿ ಜನವರಿ 25ರಂದು ಕ್ಷೇತ್ರಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನು ಸಿಎಂ ಉದ್ಘಾಟಿಸಲಿರುವುದರಿಂದ ಇಬ್ಬರೂ ಯಡಿಯೂರಪ್ಪ ಅವರ ಬಳಿ ಸಮಯಾವಕಾಶ ಕೇಳಿದ್ದಾರೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ನಾಳೆ ಬೆಳಗ್ಗೆ 8ಗಂಟೆಗೆ ಉದಾಸಿ ಮನೆಯಲ್ಲಿ ನಡೆಯುವ ಉಪಹಾರ ಕೂಟ ಸಭೆಯಲ್ಲಿ ರಾಜೀನಾಮೆ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ ಭೋಜನಾನಂತರ ಶೋಭಾ ಕರಂದ್ಲಾಜೆ ಮತ್ತು ಉದಾಸಿ ನೇತೃತ್ವದಲ್ಲಿ 16 ಶಾಸಕರು ಸ್ಪೀಕರ್ ಬೋಪಯ್ಯ ಅವರಿಗೆ ರಾಜೀನಾಮೆ ನೀಡಲಿದ್ದಾರೆ.
ಸ್ಪೀಕರ್ ಬೋಪಯ್ಯ ಸದ್ಯ ಮಡಿಕೇರಿಯಲ್ಲಿದ್ದು ನಾಳೆ ಕಚೇರಿಯಲ್ಲಿ ಇರುವಂತೆ ಅವರಿಗೆ ಮನವಿ ಮಾಡಲಾಗಿದೆ ಎನ್ನುವ ಮಾಹಿತಿಗಳೂ ಲಭ್ಯವಾಗುತ್ತಿದೆ. ಒಂದು ವೇಳೆ ಸ್ಪೀಕರ್ ಭೇಟಿ ಸಾಧ್ಯವಾಗದೇ ಇದ್ದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ನೇರ ರಾಜೀನಾಮೆ ನೀಡಲು ವೇದಿಕೆ ಸಜ್ಜಾಗಿದೆ ಎನ್ನುವುದು ಸದ್ಯಕ್ಕಿರುವ ಖಚಿತ ಮಾಹಿತಿ.
ತನ್ನ ಪ್ರಭಾವ ಬೆಂಬಲಿಗ ಶಾಸಕರ ಮತ್ತು ಸಚಿವರ ಮೇಲೆ ಕಮ್ಮಿಯಾಗದಂತೆ ನೋಡಿಕೊಳ್ಳಲು ಯಡಿಯೂರಪ್ಪ ನಾಳೆಯೇ ರಾಜೀನಾಮೆ ಪರ್ವಕ್ಕೆ ಮಹೂರ್ತ ಫಿಕ್ಸ್ ಮಾಡಿದ್ದಾರೆ. ನಾಳೆ ಯಡಿಯೂರಪ್ಪ ಬೆಂಬಲಿಗ ಶಾಸಕರು ರಾಜೀನಾಮೆ ನೀಡುವುದು ಖಂಡಿತ..ಖಂಡಿತ..ಖಂಡಿತ.. ಎಂದು ಬಿ ಪಿ ಹರೀಶ್ ಪ್ರಮಾಣ ಮಾಡಿದ್ದಾರೆ.
ಪ್ರವಾಸದಲ್ಲಿರುವ ಯಡಿಯೂರಪ್ಪ ಇಂದು ತಡರಾತ್ರಿ ಬೆಂಗಳೂರು ತಲುಪಲಿದ್ದಾರೆ. ರಾಜ್ಯ ರಾಜಕೀಯಕ್ಕೆ ನಾಳೆ ನಿರ್ಣಾಯಕ ದಿನವಾಗುವುದಂತೂ ಖಚಿತ.
(ವಿವಿಧ ಮೂಲಗಳಿಂದ)












Click it and Unblock the Notifications