ಏಪ್ರಿಲ್ ನಲ್ಲೇ ಚುನಾವಣೆ ನಡೆಯಲಿದೆ: ಬಿಎಸ್ ವೈ

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 10 ರಂದು ಆಯೋಗವು ಅಂತಿಮ ಅಧಿಸೂಚನೆ ಹೊರಡಿಸಲಿದೆ. ಏಪ್ರಿಲ್ ನಲ್ಲಿ ಚುನಾವಣೆ ನಡೆಯುವುದು ಶತಸಿದ್ಧ ಎಂದು ತಿಳಿಸಿದರು.
ಕರ್ನಾಟಕ ಜನತಾ ಪಕ್ಷ ಅಗತ್ಯ ಸಿದ್ಧತೆ ನಡೆಸಿ ಯಾವುದೇ ಸಂದರ್ಭದಲ್ಲೂ ಚುನಾವಣೆ ಬಂದರೆ ಎದುರಿಸಲು ಸಜ್ಜಾಗಿದ್ದೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಸ್ವಂತ ಬಲದ ಮೇಲೆ 224 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಿದೆ ಎಂದರು.
ಬಿಜೆಪಿ ನಂತರ ಕಾಂಗ್ರೆಸ್ ಪಕ್ಷದಿಂದಲೂ ಹಲವರು ಪಕ್ಷ ತೊರೆಯುವ ಮನಸ್ಸು ಮಾಡಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ವಲಸೆ ಪರ್ವ ಆರಂಭವಾಗಲಿದೆ. ಶೀಘ್ರದಲ್ಲೇ ಯಾರು ಯಾರು ಸೇರಲಿದ್ದಾರೆ ಎಂಬುದು ಸ್ಪಷ್ಟಗೊಳ್ಳಲಿದೆ ಎಂದಿದ್ದಾರೆ.
ಬಜೆಟ್ ಮಂಡನೆ: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಮಂಡಿಸಿದ ಬಜೆಟ್ ಕಾರ್ಯಕ್ರಮಗಳು ಇನ್ನೂ ಅನುಷ್ಠಾನಗೊಳಿಸಿಲ್ಲ. 2012-13 ರ ಸಾಲಿನಲ್ಲಿ 1 ಲಕ್ಷ ಕೋಟಿ ಬಜೆಟ್ ಮಂಡಿಸಿ ಯಾವ ಯಾವ ಯೋಜನೆ ಕಾರ್ಯಗತಗೊಳಿಸಲು ಸಾಧ್ಯ. ಫೆ.8 ರಂದು ಶೆಟ್ಟರ್ ಅವರು ಬಜೆಟ್ ಮಂಡಿಸುತ್ತಾರೆ ಎಂಬುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ಯಡಿಯೂರಪ್ಪ ಹೇಳಿದರು.
ನನ್ನ ಅಧಿಕಾರ ಅವಧ್ಯಲ್ಲಿ ನಾನು ರಾಜ್ಯದ ಸಂಪತ್ತು ಲೂಟಿ ಮಾಡಿದ್ದೇನೆ ಎಂದು ಆರೋಪ ಹೊರೆಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಣ್ಣ ಬಯಲಾಗಲಿದೆ. ಲೂಟಿಕೂರರು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಯಡಿಯೂರಪ್ಪ ಹೇಳಿದರು.
ಅಪ್ಪ ಮಕ್ಕಳು ನನ್ನ ವಿರುದ್ಧ ರಾಜ್ಯದಲ್ಲಿ ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಇವರ ರಾಜಕೀಯ ದೊಂಬರಾಟಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು. ಈ ಮಾತಿನ ನಡುವೆ ಎಐಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಅವರಿಗೆ ಯಡಿಯೂರಪ್ಪ ಅವರು ಶುಭ ಹಾರೈಸಿದರು.
ಈ ನಡುವೆ ಜ.23ರಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಲೋಕೋಪಯೋಗಿ ಸಚಿವ ಸಿ.ಎಂ ಉದಾಸಿ ಸೇರಿದಂತೆ 10 ರಿಂದ 15 ಮಂದಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಶೆಟ್ಟರ್ ಸರ್ಕಾರ ಬಹುಮತ ಕಳೆದುಕೊಂಡು ಮುಜುಗರ ಪರಿಸ್ಥಿತಿ ಎದುರಿಸಲಿದೆ.
ಶಾಸಕ ಬಿ.ಪಿ. ಹರೀಶ್, ಸುರೇಶ್ ಗೌಡ ಪಾಟೀಲ್, ನೆಹರೂ ಓಲೇಕಾರ್, ಜಿ. ಶಿವಣ್ಣ, ಚಂದ್ರಣ್ಣ, ಬಸವರಾಜ್ ಪಾಟೀಲ್ ಅಟ್ಟೂರ್, ಚಿಕ್ಕನಗೌಡ ಶ್ರೀಶೈಲಪ್ಪ ಬಿದರೂರು, ಹರತಾಳ್ ಹಾಲಪ್ಪ ಸೇರಿದಂತೆ ಹಲವರು ಶಾಸಕರು ಬಿಜೆಪಿಯಿಂದ ಒಂದು ಕಾಲು ಆಚೆ ಇಟ್ಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.












Click it and Unblock the Notifications