ಕೇಸರಿ ಭಯೋತ್ಪಾದನೆ ಹಿಂದೆ ಬಿಜೆಪಿ, ಆರೆಸ್ಸೆಸ್ : ಶಿಂಧೆ

ಜೈಪುರದಲ್ಲಿ ನಡೆದಿರುವ ಎಐಸಿಸಿ ಕಾರ್ಯಕಾರಿ ಸಭೆ ಚಿಂತನ್ ಶಿಬಿರದಲ್ಲಿ ಮಾತನಾಡುತ್ತಾ ಗೃಹ ಸಚಿವ ಶಿಂಧೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ತರಬೇತಿ ಕೇಂದ್ರಗಳಿಂದ ಕೇಸರಿ ಉಗ್ರವಾದಿಗಳು ಹೊರ ಬಂದಿರುವ ವರದಿಗಳು ತನಿಖೆಯಿಂದ ದೃಢಪಟ್ಟಿದೆ. ಸಂಜ್ಯೋತ ಎಕ್ಸ್ ಪ್ರೆಸ್, ಮೆಕ್ಕಾ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದು, ಮಲೇಗಾಂವ್ ಸ್ಫೋಟದ ಹಿಂದೆ ಕೇಸರಿ ಉಗ್ರಗಾಮಿಗಳ ಕೈವಾಡವಿದೆ ಎಂದು ಸಚಿವ ಶಿಂಧೆ ಅಭಿಪ್ರಾಯಪಟ್ಟಿದ್ದಾರೆ.
ಶಿಂಧೆ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.
ಕ್ಷಮೆಯಾಚನೆ ಪ್ರತಿಕ್ರಿಯಿಸಿದ ಶಿಂಧೆ, ನಾನೇನು ಹೊಸ ವಿಷಯವನ್ನು ಹೇಳುತ್ತಿಲ್ಲ. ಈಗಾಗಲೇ ಕೇಸರಿ ಉಗ್ರವಾದದ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ವಿಸ್ತೃತ ವರದಿ ಬಂದಿದೆ ಎಂದಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರಗಾಮಿಗಳ ಕಾಟ, ಈಶಾನ್ಯ ರಾಜ್ಯಗಳ ನಕ್ಸಲಿಸಂ ಸದ್ಯಕ್ಕೆ ದೇಶದ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ. ಶಾಂತಿ ಮಾತುಕತೆ ಪ್ರಯತ್ನ ಜಾರಿಯಲ್ಲಿದೆ ಎಂದರು.
ಜಾತ್ಯತೀತ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ದಲಿತರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಉನ್ನತ ಹುದ್ದೆ ಸಿಗುವಂತೆ ಕಾಂಗ್ರೆಸ್ ಶ್ರಮಿಸಿದೆ. ಎಂದರು.
ಬಿಜೆಪಿ ಕಿಡಿಕಿಡಿ: ಉಗ್ರರು ಭಾರತದೊಳಗೆ ನುಸುಳುತ್ತಿದ್ದರೆ ಅವರನ್ನು ಗುಲಾಬಿ ನೀಡಿ ಸ್ವಾಗತಿಸುವ ಆಡಳಿತ ಪಕ್ಷದಿಂದ ಬೇರೆ ಏನ್ನನ್ನೂ ನಿರೀಕ್ಷಿಸಲು ಸಾಧ್ಯ. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ತಕ್ಷಣವೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸುಶೀಲ್ ಕುಮಾರ್ ಶಿಂಧೆ ಅವರು ಕ್ಷಮೆಯಾಚಿಸಲಿ ಎಂದು ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಈ ರೀತಿ ಹೇಳಿಕೆ ನೀಡುವುದು ಕಾಂಗ್ರೆಸ್ಸಿಗರ ಹೇಡಿತನವನ್ನು ತೋರಿಸುತ್ತದೆ. ಆದರೆ, ದೇಶದ ಗೃಹ ಸಚಿವರೇ ಈ ರೀತಿ ಮಾತನಾಡಿದರೆ ಅದು ದೇಶಕ್ಕೆ ಅಪಮಾನ. ನಮ್ಮ ಸಂಘಟನೆಯ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಪ್ರತಿಕ್ರಿಯಿಸಿದ್ದಾರೆ.
ಸಂಸದೀಯ ವ್ಯವಹಾರ ಖಾತೆ ಸಚಿವ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿ, ಹಿಂದೂ ಭಯೋತ್ಪಾದನೆ ಅಥವಾ ಮುಸ್ಲಿಂ ಭಯೋತ್ಪಾದನೆ ಎಂಬುದೇ ಇಲ್ಲ ಎಂದು ಶಿಂಧೆ ಹೇಳಿಕೆಗೆ ಪರೋಕ್ಷವಾಗಿ ಸಮರ್ಥನೆ ನೀಡಿದ್ದಾರೆ.












Click it and Unblock the Notifications