ದೊಡ್ಡಗೌಡ್ರು ಸಿಎಂ ಶೆಟ್ಟರ್ ಹೆಗಲ ಮೇಲೆ ಕೈಯಿಟ್ಟರ್!

ನಿನ್ನೆ ಏನಾಯಿತೆಂದರೆ ಕಾವೇರಿ ಐ ತೀರ್ಪು ಅಧಿಸೂಚನೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮ ಅನುಭವ ಧಾರೆಯೆರೆಲು ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದರು.
ಸರಿ, ದೇವೇಗೌಡರೇನೋ ಹಿರಿಯರು ಅದರಲ್ಲೂ ಕಾವೇರಿ ನದಿ ನೀರು ವಿಷಯದಲ್ಲಿ ನಿಜಕ್ಕೂ ಅವರ ಅನುಭವ ಅಮೃತಕ್ಕೆ ಸಮಾನ. ಅದನ್ನು ಹಾಲಿ ಸರಕಾರಕ್ಕೆ ಧಾರೆಯೆರೆದಿದ್ದಾರೆ. ಆದರೆ ಅದೆಲ್ಲಾ OK. ಭೇಟಿ ಮುಗಿಸಿ, ಹೊರಡಲುನುವಾದ ಮಾಜಿ ಪ್ರಧಾನಿಯನ್ನು ಬೀಳ್ಕೊಡಲು ಶೆಟ್ಟರ್ ಸೌಜನ್ಯಕ್ಕಾಗಿ ಕಾರಿಡಾರಿನವರೆಗೂ ಬಂದಿದ್ದಾರೆ.
ಆ ಸಂದರ್ಭದಲ್ಲಿ ಅಭ್ಯಾಸ ಬಲದಿಂದ ದೇವೇಗೌಡರು ಸುಮ್ಮನೆ ಹಾಗೇ ಶೆಟ್ಟರ್ ಅವರ ಹೆಗಲ ಮೇಲೆ ಕೈಯಿಟ್ಟಿದ್ದಾರೆ (ಒಮ್ಮೆ ಚಿತ್ರವನ್ನು ನೋಡಿ). ಇದರಿಂದ ಶೆಟ್ಟರಿಗೆ ಒಳಗೊಳಗೇ ಹಾವು ತುಳಿದಂತಾಗಿರಬೇಕು. ಏಕೆಂದರೆ ದೇವೇಗೌಡರು ತಮ್ಮ ಹೆಗಲು ಮುಟ್ಟುವುದು ಅಂದರೇ ಸುಮ್ನೇನಾ. ಏನೋ ಅಪಾಯ ಕಾದಿದೆ ಎಂಬುದು 'ಮಾಜಿ ಪತ್ರಕರ್ತ' ಶೆಟ್ಟರಿಗೆ ಖಾತರಿಯಾಗಿರಬೇಕು.
ಏನಪ್ಪಾ ಅಂದರೆ 'ನಮ್ಮ ದೊಡ್ಡಗೌಡರು ಯಾರದಾದರೂ ಹೆಗಲ ಮೇಲೆ ಕೈಯಿಟ್ಟರೆಂದರೆ ಮುಗಿಯಿತು ಅವರ ಕಥೆ' ಅಂತಲೇ ಪತ್ರಿಕಾವಲಯದಲ್ಲಿ ಪ್ರತೀತಿ ಇದೆ. ದೇವೇಗೌಡರ ಮೇಲಿನ ಪ್ರೀತಿಯಿಂದ ಇಂತಹ ಪ್ರತೀತಿ ಹುಟ್ಟುಕೊಂಡಿದೆ ಅಂತಲ್ಲ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿಯಿಂದ ಹಿಡಿದು ತಾಜಾ ಆಗಿ ಹಿಂದಿನ ಮುಖ್ಯಮಂತ್ರಿ ಸದಾನಂದ ಗೌಡರ ವರೆಗೂ.
ಆರೆಂಟು ತಿಂಗಳ ಹಿಂದೆ ದೇವೇಗೌಡರು ಸದಾನಂದ ಗೌಡರನ್ನು ಭೇಟಿ ಮಾಡಿ, ರಾಜಕೀಯವಾಗಿ ಗೌಡ-ಗೌಡ ಭಾಯಿ ಹೈ ಎನ್ನುತ್ತಾ ಅವರ ಹೆಗಲ ಮೇಲೆ ಕೈಯಿಟ್ಟಿದ್ದರು. ಅಷ್ಟೇ, ಮುಂದೆ ಸದಾನಂದರು ಹೆಚ್ಚು ಕಾಲ ಅಧಿಕಾರದಲ್ಲಿರಲಿಲ್ಲ. ಇದೀಗ ಜಗದೀಶ್ ಶೆಟ್ಟರ್ ಅವರ ಸರದಿ.
ಅಂದಹಾಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚಾಮರಾಜನಗರಕ್ಕೆ ಇಂದು ಭೇಟಿ ನೀಡಿರುವುದರಿಂದಲೇ ಅಧಿಕಾರ ವಂಚಿತರಾಗುತ್ತಾರೆ ಎಂದೇನೂ ಇಲ್ಲ. ಏಕೆಂದರೆ ಅದರ ಮುನ್ನ ದಿನವೇ ದೊಡ್ಡ ಗೌಡರು ಶೆಟ್ಟರ್ ಅವರ ಹೆಗಲು ಹಿಡಿದು ಜಗ್ಗಿದ್ದಾರೆ!












Click it and Unblock the Notifications