ಛೆ! ಟ್ರೈನಿನಲ್ಲೂ ನಡೆಯಿತು ಅತ್ಯಾಚಾರ ಯತ್ನ

ಅಂದಹಾಗೆ ಆರು ತಿಂಗಳ ಹಿಂದೆ ಮಂಡ್ಯ ಹಳಿಗಳ ಮೇಲೆ (ಆಶಾ) ಇಂತಹುದೇ ಘಟನೆ ನಡೆದಿತ್ತು. ಅದರ ಬಗ್ಗೆ ಶೋಭಾ ಮೇಡಂ ಅವರ ಸರಕಾರ ಏನು ಕ್ರಮ ಕೈಗೊಂಡಿದೆಯೋ ತಿಳಿಯುತ್ತಿಲ್ಲ. ಹಾಗೆ ಶೋಭಾರ ತವರೂರಿನ ಭಾಗದಲ್ಲಿ ಇಂತಹುದೇ ಪೈಶಾಚಿಕ ಕೃತ್ಯ ನಡೆದಿತ್ತು. ಆಗ ಮೇಡಂ 'ಸೌಜನ್ಯ'ಕ್ಕೂ ಒಂದು ಮಾತು ಆಡಿರಲಿಲ್ಲ.
ಅದೆಲ್ಲಾ ಹಾಗಿರಲಿ, ನಿನ್ನೆ ಬಿಹಾರದಲ್ಲಿ ಏನಾಗಿದೆಯೆಂದರೆ... (ಮೊದಲೇ ಅದು ಬಿಹಾರ ರಾಜ್ಯ. ಈಗೀಗ ಬಿಡಿ ಎಲ್ಲ ರಾಜ್ಯಗಳೂ ಬಿಹಾರವಾಗಿ ಮಾರ್ಪಡುತ್ತಿವೆ, ಛೆ!) ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಕಾಮಾಂಧರು ತಮ್ಮ ಮೇಲೆ ಮುಗಿಬಿದ್ದಾಗ ಆಕೆ ಅನ್ಯ ಮಾರ್ಗ ಕಾಣದೆ ಶರವೇಗದಲ್ಲಿ ಚಲಿಸುತ್ತಿರುವ ಎಕ್ಸ್ ಪ್ರೆಸ್ ಟ್ರೈನಿನಿಂದ ಹೊರಕ್ಕೆ ಹಾರಿ, ತಮ್ಮ ಮಾನ ಮರ್ಯಾದೆಯನ್ನು ಕಾಪಾಡಿಕೊಂಡಿದ್ದಾರೆ.
ಇಡೀ ದೇಶವೇ ಅತ್ಯಾಚಾರಿಗಳ ಬಗ್ಗೆ ಬೊಬ್ಬಿಡುತ್ತಿರುವಾಗ ಇಲ್ಲಿ ಕಾಮಚೇಷ್ಟೆ ಮಾಡಿದವರು ಯಾರಪ್ಪಾ ಅಂತ ಕೇಳಿನೋಡಿದರೆ ಮನಸ್ಸು ಮತ್ತಷ್ಟು ಮ್ಲಾನಗೊಳ್ಳುತ್ತದೆ. ಅವರು ದೇಶಮಾತೆಯ ಕಾಯುವ ಮಹತ್ತರ ಜವಾಬ್ದಾರಿ ಹೊತ್ತ ಸೇನಾ ಯೋಧರು.
ಭೋಜಪುರ ಜಿಲ್ಲೆಯ ಅರಾ ರೈಲ್ವೆ ಜಂಕ್ಷನ್ ಬಳಿ ಯುಪಿ ದಿಬ್ರೂಗಢ-ದೆಹಲಿ ಬ್ರಹ್ಮಪುತ್ರ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಈ ಮಾನಗೇಡಿ ಘಟನೆ ಗುರುವಾರ ನಡೆದಿದೆ. ಬಾಧಿತ ಮಹಿಳೆ ಡಾರ್ಜಿಲಿಂಗ್ ನವರು. 30 ವರ್ಷದ ಆಕೆಯ ಕಾಲುಗಳು, ತಲೆಗೆ ತೀವ್ರ ಪೆಟ್ಟುಗಳಾಗಿವೆ. ರಾಜಧಾನಿ ಪಟ್ನಾದಿಂದ 50 ಕಿಮೀ ದೂರದಲ್ಲಿರುವ ಸಾದರ್ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಬ್ಬ ಕಾಮಪಿಶಾಚಿಯನ್ನು ಹಿಮಾಚಲಪ್ರದೇಶದ ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಕೃತ್ಯದ ನಂತರ ಟಾಯ್ಲೆಟ್ ನೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡಿದ್ದ ಈ ಆರೋಪಿಯನ್ನು ಅಸ್ಸಾಂ ರೈಫಲ್ಸ್ ನ ಎ.ಡಿ. ಉಪಾಧ್ಯ ಎಂಬುವವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತೊಬ್ಬ ಆರೋಪಿ ಯೋಧ ಗೌಜುಗದ್ದಲದ ಸದವಕಾಶದಲ್ಲಿ ಪಕ್ಕದ ಬೋಗಿ ಮೂಲಕ ಪರಾರಿಯಾಗಿದ್ದಾನೆ. ಆದರೆ ತಕ್ಷಣಕ್ಕೆ ಅವನು ಪರಾರಿಯಾಗಿರಬಹುದು. ಇಂದಲ್ಲ ನಾಳೆ ಸಿಗುತ್ತಾನೆ. ಇಬ್ಬರಿಗೂ ತಕ್ಕ ಶಾಸ್ತಿಯಾಗಲಿ.












Click it and Unblock the Notifications