ಡಿ.25 ತ್ರೀ ಇನ್ ಒನ್ ಹಬ್ಬಕ್ಕೆ ಬೆಂಗಳೂರು ಸಜ್ಜು
ಮಂಗಳವಾರ ಡಿಸೆಂಬರ್ 25 ತ್ರೀ ಇನ್ ಒನ್ ದಿನ! ರೋಮನ್ ಕ್ಯಾಥೋಲಿಕರಿಗೆ ಪವಿತ್ರವಾದ ಕ್ರಿಸ್ ಮಸ್ ಹಬ್ಬ. ಜಾತ್ಯತೀತ-ಹಿಂದು ರಾಷ್ಟ್ರ ಭಾರತ ಮತ್ತು ಇಸ್ಲಾಂ ಕಂಟ್ರಿ ಪಾಕ್ ನಡುವೆ ಬೆಂಗಳೂರಿನಲ್ಲಿ ಸಜ್ಜಾಗಿರುವ ಟಿ20 ಕ್ರಿಕೆಟ್ ಹಬ್ಬ. ಪಾಕ್ ಜತೆಗೆ ಸುಮಧುರ ಸಂಬಂಧ ವೃದ್ಧಿಗಾಗಿ ಪ್ರಯತ್ನಿಸಿದ ರಾಜಕಾರಣಿ, ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರ 88 ನೇ ಹುಟ್ಟಹಬ್ಬ.
ಕ್ರಿಶ್ಚಿಯನ್ ಸ್ನೇಹಿತರಿಗೆ ಹಬ್ಬದ ಶುಭಾಶಯ ಮತ್ತು ವಾಜಪೇಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ ಬೆಂಗಳೂರಿನ ಮಂಗಳವಾರದ ಸುದ್ದಿ ವಿದ್ಯಮಾನಗಳತ್ತ ಈಗಲೇ ಕಣ್ಣು ಹಾಯಿಸೋಣ. ಯಾಕೆಂದರೆ, ಭಾರತ ತನ್ನ ಕಡುವೈರಿ ದೇಶ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದಿಗೆ ಕ್ರಿಕೆಟ್ ಆಟ-ಕಾಟ ಶುರುವಿಟ್ಟುಕೊಳ್ಳುತ್ತದೆ.

ಮಂಗಳವಾರ(ಡಿ.25) ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ 25ನೇ ಟಿ20 ಪಂದ್ಯಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಸಚಿನ್ ಇಲ್ಲದೆ ತಂಡ ಮಂಕಾಗಿದೆ ಎಂದು ಭಾರತದ ಕ್ಯಾಪ್ಟನ್ ಧೋನಿ ಸೋಮವಾರ ಬೆಳಗ್ಗೆ ಮೈಕ್ ಹಿಡಿದು ಘೋಷಿಸಿದ್ದಾರೆ. ಭಾರತ ತಂಡದಲ್ಲಿ ವೇಗದ ಬೌಲರ್ ಗಳೇ ಇಲ್ಲ ಎಂದು ಪಾಕಿಸ್ತಾನ ನಾಯಕ ಮಹಮ್ಮದ್ ಹಫೀಜ್ ಹೇಳಿದ್ದಾರೆ.
ಸ್ಟೇಡಿಯಂಗೆ ಹದ್ದಿನ ಕಣ್ಣು : ಸ್ಟೇಡಿಯಂಗೆ ಕಾಲಿಡುವ ಪ್ರತಿಯೊಬ್ಬರ ಮೇಲೆ ಸಿಸಿಟಿವಿಗಳ ಮೂಲಕ ನಿಗಾವಹಿಸಲಾಗುವುದು. ಪಂದ್ಯದ ಭದ್ರತೆಗಾಗಿ 'ಗರುಡ ಪಡೆ' ಯನ್ನು ಸ್ಥಾಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ಓಡಾಟವನ್ನು ನಿರ್ಬಂಧ ಹೇರಲಾಗಿದೆ. ವಿಶೇಷ ಉಗ್ರ ನಿಗ್ರಹ ಪಡೆಯನ್ನು ಸ್ಥಾಪಿಸಲಾಗಿದ್ದು, ಎನ್ ಎಸ್ ಜಿ ಕಮ್ಯಾಂಡೋಗಳ ನೆರವು ಪಡೆಯಲಾಗಿದೆ.
ಉಗ್ರ ನಿಗ್ರಹ ಪಡೆಗೆ 'ಗರುಡ ಫೋರ್ಸ್' ಎಂದು ಹೆಸರಿಡಲಾಗಿದೆ. 2 ತಂಡಗಳು ಇಡೀ ಸ್ಟೇಡಿಯಂನ ಭದ್ರತೆಯ ಜವಾಬ್ದಾರಿ ಹೊರೆಲಿದೆ. ಗರುಡ ಪಡೆ ಜೊತೆಗೆ ಮೀಸಲು ಪೊಲೀಸ್ ಪಡೆ ಕೈ ಜೋಡಿಸಲಿದೆ ಎಂದು ಆಯುಕ್ತ ಬಿ.ಜಿ. ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಶ್ರೀರಾಮಸೇನೆ ಬೆದರಿಕೆ: ಭಾರತ-ಪಾಕ್ ಪಂದ್ಯಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ಅಡ್ಡಿ ಪಡಿಸುವ ಸಾಧ್ಯತೆಯನ್ನು ಮಿರ್ಜಿ ತಳ್ಳಿ ಹಾಕಿದ್ದಾರೆ. ಟಿಕೆಟ್ ಪಡೆದಿರುವ ಪ್ರತಿಯೊಬ್ಬರ ಚಿತ್ರ ನಮ್ಮ ಬಳಿ ಇದೆ. ಸ್ಟೇಡಿಯಂ ಪ್ರವೇಶಕ್ಕೆ ಮುನ್ನ ಎಲ್ಲರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಯಾವುದೇ ಸಂಘಟನೆ ಆತಂಕ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಮಿರ್ಜಿ ಹೇಳಿದ್ದಾರೆ.
ಸುಮಾರು 2,400 ಪೊಲೀಸರು, ರಾಜ್ಯ ಮೀಸಲು ಪಡೆಯ 12 ಪ್ಲಾಟೂನ್ ಗಳು ಹಾಗೂ 10 ಸಶಸ್ತ್ರ ಮೀಸಲು ಪಡೆ ತಂಡವನ್ನು ಪಂದ್ಯದ ಸುರಕ್ಷತೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಟ್ರಾಫಿಕ್ ಬದಲಿ ಮಾರ್ಗ: ಕೆಎಸ್ ಸಿಎ ಸ್ಟೇಡಿಯಂ ಸುತ್ತಮುತ್ತ ಮಂಗಳವಾರ(ಡಿ.25) ಬೆಳಗ್ಗೆ 11 ಇಂದ ರಾತ್ರಿ 11 ಗಂಟೆ ಸಂಚಾರ ನಿರ್ಬಂಧಿಸಲಾಗಿದೆ. ಕ್ವೀನ್ಸ್ ರಸ್ತೆಯಲ್ಲಿ ಸಂಚಾರ ಹಾಗೂ ವಾಹನ ನಿಲುಗಡೆಗೆ ನಿಬಂಧ ಹೇರಲಾಗಿದೆ.
ಸ್ಟೇಡಿಯಂ ಗೇಟುಗಳು ಮಧ್ಯಾಹ್ನ 2 ಗಂಟೆಗೆ ಮಾತ್ರ ತೆರೆಯಲಾಗುತ್ತದೆ.ಗೇಟ್ ನಂ.1 ರ ಬಳಿ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಲಾಗಿದೆ. ಸಿಸಿಟಿವಿ ಕೆಮರಾ ಮೂಲಕ ಎಲ್ಲಾ ಚಲನವಲನಗಳನ್ನು ಗಮನಿಸಲಾಗುತ್ತದೆ ಎಂದು ಮಿರ್ಜಿ ಹೇಳಿದ್ದಾರೆ.
ನಿಷೇಧ: ಸಿಗರೇಟ್, ಬೀಡಿ, ತಂಬಾಕು, ಮಾದಕ ದ್ರವ್ಯಗಳು, ಬೆಂಕಿಪೊಟ್ಟಣ, ಲೈಟರ್, ವಾಟರ್ ಬಾಟಲ್, ವಿಡಿಯೋ ಕೆಮೆರಾ, ಸ್ಟಿಲ್ ಕೆಮೆರಾ, ಆಲ್ಕೋಹಾಲ್ ದ್ರವ್ಯಗಳು, ಚಾಕು, ಸ್ಫೋಟಕ ವಸ್ತು, ಗಾಜು, ಬಾವುಟಗಳು, ಕೋಲು, ಪ್ಲಾಸ್ಟಿಕ್ ಕವರ್, ಹೆಲ್ಮೆಟ್ ಅಲ್ಲದೆ ಆಹಾರ ಪದಾರ್ಥಗಳನ್ನು ಸ್ಟೇಡಿಯಂ ಒಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ಹೇಳಿದೆ.












Click it and Unblock the Notifications