ಯಡಿಯೂರಪ್ಪರನ್ನು ನಾನೇಕೆ ಜೈಲಿಗೆ ಕಳಿಸಲಿ

ತಾವು ಮಾಡಿದ ಸ್ವಯಂಕೃತ ಅಪರಾಧಗಳಿಂದ ಸಮಸ್ಯೆಗಳನ್ನು ಮೈಮೇಲೆಳೆದುಕೊಂಡು ಯಡಿಯೂರಪ್ಪ ಪಕ್ಷ ಬಿಟ್ಟರು. ಅವರ ಹಗರಣಗಳು ಲೋಕಕ್ಕೆ ತಿಳಿದ ವಿಷಯ. ನಾನೇಕೆ ಸಂಚು ಮಾಡಿ ಅವರನ್ನು ಜೈಲಿಗೆ ಕಳಿಸಲಿ ಎಂದು ಸಂಸದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಪ್ರಶ್ನಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಮಾತ್ರ ಎದುರಾಳಿ, ಜೆಡಿಎಸ್ ಪಕ್ಷವನ್ನು ನಾವು ಲೆಕ್ಕಕ್ಕೆ ಇಟ್ಟಿಲ್ಲ. ರಾಜ್ಯದಲಿ ಜೆಡಿಎಸ್, ಕೆಜೆಪಿ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಆರೋಪ ಮಾಡುವುದನ್ನು ಬಿಡಲಿ: ತಾವು ಪಕ್ಷ ಬಿಡಲು ನಾನು ಕಾರಣ ಎಂದು ಯಡಿಯೂರಪ್ಪ ಅವರು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದ ಅವರು ಈಗ ಪಕ್ಷದಿಂದ ಹೊರ ಹೋಗಿದ್ದಾರೆ. ತಾವು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬಾರದೆಂಬ ಕಾರಣಕ್ಕೆ ಕಾಂಗ್ರೆಸ್ನ ಒತ್ತಡಕ್ಕೆ ಮಣಿದು ತಾವು ಬೆಳೆದ ಪಕ್ಷದ ವಿರುದ್ಧ ಹೋರಾಟ ನಡೆಸಲು ಮುಂದಾಗಿರುವುದು ವಿಷಾದನೀಯ ಎಂದು ಬಿಎಸ್ವೈ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ನೀವು ರಾಮ ರಾಜ್ಯದ ಆಚರಣೆಯನ್ನು ಬಿಟ್ಟು ರೋಮ್ ರಾಜ್ಯದ ಆಚರಣೆಯಂತೆ ಸೋನಿಯಾಗಾಂಧಿ ಅವರ ಹುಟ್ಟುಹಬ್ಬದ ದಿನ ಹೊಸ ಪಕ್ಷ ಸ್ಥಾಪಿಸಿದ್ದೀರಿ. ನೀವು ಕಾಂಗ್ರೆಸ್ನ ಬಿ ತಂಡವಿದ್ದಂತೆ. ಕಾಂಗ್ರೆಸ್ ಮೊದಲಿನಿಂದಲೂ ಬಿ ತಂಡದವರನ್ನು ಒಪ್ಪಿಲ್ಲ.
ಮತದಾರರು ವ್ಯಕ್ತಿ ನೋಡಿ ಮತಹಾಕುವ ಕಾಲ ಇದಲ್ಲ. ಪಕ್ಷ ಹಾಗೂ ಅದರ ಸಾಧನೆ ನೋಡಿ ಮತ ಹಾಕುತ್ತಾರೆ. ಹಾಗಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಇತರೆ ಪಕ್ಷಗಳಿಗೆ ಮತ ನೀಡಿ ವ್ಯರ್ಥ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ಗೆ ಅಂತಿಮ ಕಾಲ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲೂ ಬಿಜೆಪಿ ಆಡಳಿತಕ್ಕೆ ಬರಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ್, ದೆಹಲಿಯಲ್ಲೂ ಬಿಜೆಪಿ ವಿಜಯ ಸಾಧಿಸಲಿದ್ದು ಮುಂದಿನ ಅವಧಿಯಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಲಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಅನಂತ್-ಎಂಎಂ ಸಿಂಗ್ ಸಾಮ್ಯತೆ: ಬಿಜೆಪಿಯ ದಿಲ್ಲಿ ಧುರೀಣ ಅನಂತ್ ಕುಮಾರ್ ಮತ್ತು ಪ್ರಧಾನಿ ಮನ್ ಮೋಹನ್ ಸಿಂಗ್ ಸ್ವಭಾವದಲ್ಲಿ ಒಂದು ವಿಚಿತ್ರ ವಿಶೇಷ ಸಾಮ್ಯತೆ ಇವತ್ತು ಜಾಹೀರಾಯಿತು.
ಯಡಿಯೂರಪ್ಪನವರು ತಮ್ಮನ್ನು ಎಷ್ಟೇ ತೆಗಳಿದರೂ 'ಅಹಂಕಾರಕ್ಕೆ ಉದಾಸೀನವೇ ಉತ್ತರವೋ' ಎಂಬಂತೆ ಸುಮ್ಮನೆ ಇದ್ದುಬಿಡುವ ಅನಂತ್ ಸೋಮವಾರ ಬಿಎಸ್ ವೈ ಮಾತಿಗೆ ಎದಿರೋಟು ಕೊಟ್ಟರು.
ಅಂತೆಯೇ, ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು 6 ದಿನಗಳ ನಂತರ ಭಾರತದ ಪ್ರಧಾನ ಮಂತ್ರಿ ಮನ್ ಮೋಹನ್ ಸೋಮವಾರ ಬಾಯಿಬಿಟ್ಟು ಮಾತನಾಡುವ ಔದಾರ್ಯ ತೋರಿದರು. ನಮ್ಮ ನಾಯಕರುಗಳಲ್ಲಿ ಎಂಥ ಸಾಮ್ಯ, ಎಂಥ ಸಾಮ್ಯ ! ಏನು ಅಂದ ಏನು ಚೆಂದ!












Click it and Unblock the Notifications