ರಾಜಕೀಯ ಸಭೆ ಸಮಾವೇಶಗಳ ಹಾವಳಿ ಶುರು

ಇತ್ತೀಚನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷ/ವ್ಯಕ್ತಿ ಇಂತಹ ದೈತ್ಯಶಕ್ತಿ ಪ್ರದರ್ಶಿಸುವ ಸಾಹಸಕ್ಕೆ ಮುಂದಾಗಿರಲಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಪರಿಸ್ಥಿತಿಯಿರುವಾಗ ಇತರೆ ರಾಜಕೀಯ ಪಕ್ಷಗಳು ನಿನ್ನೆ ಯಡಿಯೂರಪ್ಪ ತೋರಿದ ಶಕ್ತಿಪ್ರದರ್ಶನದ ಬಗ್ಗೆ ಕರುಬುವಂತಾಗಿದೆ.
ಹಾಗಾಗಿ ಸಮಾ ಆವೇಶಕ್ಕೆ ಸಿಲುಕಿರುವ ಸಮಾವೇಶ/ಪಾದಯಾತ್ರೆ/ಸಭೆ/ಸಮಾರಂಭಗಳನ್ನು ಹಮ್ಮಿಕೊಳ್ಳುವತ್ತ ಆಲೋಚಿಸುವಂತಾಗಿದೆ. ಮತ್ತು ಇದು ರಾಜ್ಯದ ಜನತೆಗೆ ಎಚ್ಚರಿಕೆಯೂ ಆಗಿದೆ. ಏಕೆಂದರೆ ತಮ್ಮ ತಮ್ಮೆ ದೈನಂದಿನ ಜೀವನದಲ್ಲಿ ತೊಡಗುವ ಜನ ಅನಿವಾರ್ಯವಾಗಿ ರಾಜಕೀಯ ಸಮಾವೇಶಗಳಿಂದ ಒಂದಷ್ಟು ಇರುಸುಮುರುಸು/ಬಾಧೆ ಅನುಭವಿಸುವುದು ಅನಿವಾರ್ಯವಾಗುತ್ತದೆ.
ಹಾಗೆ ನೋಡಿದರೆ ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮುಲು ಆರೇಳು ತಿಂಗಳ ಹಿಂದೆಯೇ ಇಂತಹ ರಾಜಕೀಯ ಸರ್ಕಸ್ ಗಳಿಗೆ ಚಾಲನೆ ನೀಡಿ, ನಿರಂತರವಾಗಿ ಚಲಾವಣೆಯಲ್ಲಿದ್ದಾರೆ. ಅನೇಕ ಪಾದಯಾತ್ರೆಗಳನ್ನು ನಡೆಸಿ, ಜನರ ನಾಡಿಮಿಡಿತ ಅರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಡಿಸೆಂಬರ್ 12ರಂದು ಬೀದರಿನ ಗಣೇಶ ಮೈದಾನದಲ್ಲಿ ತಮ್ಮ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಮತ್ತೊಂದು ಬೃಹತ್ ಸಮಾವೇಶ ಆಯೋಜಿಸಿದ್ದಾರೆ.
ಬಿಎಸ್ಆರ್ ಕಾಂಗ್ರೆಸ್ ಪಕ್ಷದಂತೆ ಜೆಡಿಎಸ್ ಪಕ್ಷವೂ ಸಭೆ/ಸಮಾವೇಶಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿದ್ದು, ಪಕ್ಷವನ್ನು ಚಾಲ್ತಿಯಲ್ಲಿಟ್ಟಿದೆ. ಪಕ್ಷದ ಅಧಿನಾಯಕ ದೇವೇಗೌಡರು ರಾಜ್ಯ ಪ್ರವಾಸಕ್ಕೆ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ.
ಕಾಂಗ್ರೆಸ್ ಅಂತೂ ಗಾಢನಿದ್ದೆಯಲ್ಲಿದೆ. ಎರಡು ಅವಧಿಗಳ ಹಿಂದೆ ಅಧಿಕಾರ ಕಳೆದುಕೊಂಡಿದ್ದೇ ಬಂತು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಕಾಂಗ್ರೆಸ್ಸಿಗೆ ಮಂಕುಬೂದಿ ಬಡಿದಂತಾಗಿದೆ. ಈ ಮಧ್ಯೆ ದಿಢೀರನೆ ಕೆಜೆಪಿ ಅವತರಿಸಿದ್ದರಿಂದ ಒಂದಷ್ಟು ರಾಜಕೀಯ ಲೆಕ್ಕಾಚಾರಗಳೊಂದಿಗೆ ಕಾಂಗ್ರೆಸ್ ಮೈಕೊಡವಿ ನಿದ್ದೆಯಿಂದ ಎದ್ದುಹೋರಾಡುವ ಛಾತಿ ತೋರಿಸಬೇಕಿದೆ.
ಹಾಗೇನಾದರೂ ಆದರೆ ಎಲ್ಲ ಪಕ್ಷಗಳೂ ಮತದಾರನ ಬಾಗಿಲಿಗೆ ಮತಭಿಕ್ಷೆಗೆ ಬರುವುದು ಗ್ಯಾರಂಟಿ. ಆದರೆ ಮತದಾರ ಈ ಬಾರಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ನಿಜಕ್ಕೂ ವಿಪರೀತ ಕುತೂಹಲವೆಬ್ಬಿಸಿದೆ.












Click it and Unblock the Notifications