ನಾನು ಮುಖ್ಯಮಂತ್ರಿ ಆಗೋಲ್ಲ: ಎಚ್ ಡಿ ರೇವಣ್ಣ

ಇಷ್ಟಕ್ಕೂ ಅವರನ್ನ ಮುಖ್ಯಮಂತ್ರಿಯಾಗು ಅಂತ ಈ ಸರಿಹೊತ್ತಿನಲ್ಲಿ ಕೇಳಿದ್ದಾದ್ರು ಯಾರಪ್ಪಾ ಎಂದು ಪ್ರಶ್ನಿಸಬೇಡಿ. ಆದರೆ ತಮ್ಮ ಸೋದರ ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟಕ್ಕೇರುವುದಕ್ಕೆ Line Clear ಮಾಡಿಕೊಡುವ ಧಾಟಿ/ಧಾವಂತದಲ್ಲಿ ರೇವಣ್ಣ ಹೀಗೆ ಹೇಳಿರಬಹುದು. ಅಥವಾ ಅಭಾವ ವೈರಾಗ್ಯದಿಂದಲೂ ಹೇಳಿರಬಹುದು ಎಂದು ಹಾಸನದ ಜೆಡಿಎಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
'ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಜನ ಬಯಸುವವರೆಗೆ ಜನ ಸೇವೆ ಮಾಡುತ್ತೇನೆ. ಅಧಿಕಾರದ ಆಸೆ ಸುತರಾಂ ಇಲ್ಲ. ಜನ ಬೇಡ ಅಂದಕೂಡಲೆ ಮನೆಯಲ್ಲಿ ಕೂರುತ್ತೇನೆ. ನನಗೇನೂ ಆಯಷಾರಾಮಿ ಬದುಕು ಬೇಕಿಲ್ಲ. ಒಂದು ರಾಗಿ ಮುದ್ದೆ ಒಂದಷ್ಟು ಸೊಪ್ಪಿನ ಸಾರು ಇದ್ದರೆ ಸಾಕು' ಎಂದು ರೇವಣ್ಣ ಹೇಳಿದ್ದಾರೆ.
ಕುಮಾರಸ್ವಾಮಿಯವರೇ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ: ಇದೇ ವೇಳೆ 'ಎಚ್ ಡಿ ಕುಮಾರಸ್ವಾಮಿಯೇ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಸ್ಪಷ್ಟಪಡಿಸಿದ ರೇವಣ್ಣ ಈಗಾಗಲೇ 150 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರುಗಳು ಪಟ್ಟಿಯನ್ನು ಅನುಮೋದಿಸಿದ ಕೂಡಲೇ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
'ಮಾಜಿ ಸಿಎಂ ಯಡಿಯೂರಪ್ಪ ಅವರ KJP ಬಗ್ಗೆ ಮಾತನಾಡಿದ ರೇವಣ್ಣ, ತಮ್ಮ ವಿರುದ್ಧ ಇರುವ ಕೇಸುಗಳನ್ನು ತಡೆಹಿಡಿಯಲಿ, ಆ ಮೂಲಕ ತಮಗೆ ಅನುಕೂಲ ಮಾಡಿಕೊಡಲಿ ಎಂಬ ಮಹತ್ತರ ಆಸೆಯೊಂದಿಗೆ ಯಡಿಯೂರಪ್ನೋರು ಕೆಜೆಪಿ ಮೂಲಕ 'ಕೈ'ಹಿಡಿದಿದ್ದಾರೆ. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಆ ಮೂಲಕ ಲಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಂಪೂರ್ಣ ನಾಶ ಮಾಡುವ ಶಕ್ತಿಯನ್ನು ಅವರಿಗೆ ನೀಡಲಿ' ಎಂದು ಪ್ರಾರ್ಥಿಸುವುದಾಗಿ ರೇವಣ್ಣ ಹೇಳಿದರು.












Click it and Unblock the Notifications