ಕೆಆರ್ ಎಸ್, ವಿಧಾನ ಸೌಧ ಮುತ್ತಿಗೆಗೆ ರೈತರು ಸಜ್ಜು

ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರು ಕೆಆರ್ಎಸ್ ಮುತ್ತಿಗೆ ಕಾರ್ಯಕ್ರಮಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನೂರಾರು ರೈತರು ಇಂದು ಕೆಆರ್ಎಸ್ಗೆ ತೆರಳಿದ್ದರು. ಆದರೆ ಕೃಷ್ಣರಾಜ ಸಾಗರ ಜಲಾಶಯದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ರೈತರು ಉತ್ತರ ಬಾಗಿಲ ಮೂಲಕ ಕೆಆರ್ಎಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದರು. ಬಳಿಕ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ಆಗಮಿಸಿ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಪೊಲೀಸರು ಇವರನ್ನು ತಡೆದು ಮುತ್ತಿಗೆ ಕಾರ್ಯಕ್ರಮವನ್ನು ವಿಫಲಗೊಳಿಸಿದರು.
ಆನಂತರ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಕೆ.ಎಸ್.ನಂಜುಂಡೇಗೌಡ ಸೇರಿದಂತೆ ಹಲವಾರು ರೈತರು ಈ ಸಂದರ್ಭದಲ್ಲಿ ನೀರು ನಿಲ್ಲಿಸುವವರೆಗೂ ಆಮರಣಾಂತ ಉಪವಾಸ ನಡೆಸುವುದಾಗಿ ರೈತರು ಬಿಗಿಪಟ್ಟು ಹಿಡಿದರು.
ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿರುವ ರೈತರು ಸೋಮವಾರ (ಡಿ.10) ವಿಧಾನಸೌಧ ಮುತ್ತಿಗೆ ಕಾರ್ಯ ಹಮ್ಮಿಕೊಂಡಿದ್ದಾರೆ. ಮೊದಲಿಗೆ ಕೃಷ್ಣರಾಜಸಾಗರದ ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು ನಂತರ ವಿಧಾನಸೌಧ ನಮ್ಮ ಗುರಿ ಎಂದು ಮಾದೇಗೌಡ ಹೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವವರೆಗೂ ಹೋರಾಟ ನಿಲ್ಲದು ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಹೇಳಿದ್ದಾರೆ. ಜನತೆಯ ಪ್ರತಿಭಟನೆಯನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಪದೇ ಪದೇ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರಲ್ಲಿ ತೀವ್ರ ಬೇಸರ ಉಂಟುಮಾಡಿದೆ.
ಚಳುವಳಿ ತೀವ್ರಗೊಂಡಂತೆಲ್ಲಾ ನೀರಿನ ಹೊರಹರಿವು ಹೆಚ್ಚಳವಾಗುತ್ತಿದೆ ಎಂದು ಮಾದೇಗೌಡ ಕಿಡಿಕಾರಿದರು. ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಹೋರಾಟ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ ಅವರು, ಚಳುವಳಿ ಒಂದೇ ಬಾರಿಗೆ ಯಶಸ್ವಿಯಾಗುವುದಿಲ್ಲ, ಸ್ವಾತಂತ್ರ್ಯ ಹೋರಾಟ ಹಲವು ವರ್ಷ ನಡೆದಿತ್ತು ಎಂದರು.
ಭಾನುವಾರ ಕೂಡಾ ಮಂಡ್ಯ ಮದ್ದೂರು ಗೆಜ್ಜಲಗೆರೆ ಸೇರಿದಂತೆ ಹಲವೆಡೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಸೋಮವಾರದಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ರೈತ ಸಂಘಟನೆಗಳು ಹೆಚ್ಚಿಸಿದೆ.
ತಮಿಳುನಾಡು ಗುಡುಗು : ಪಿಎಂಕೆ ಮುಖ್ಯಸ್ಥ ಎಸ್ ರಾಮದಾಸ್ ಮಾತನಾಡಿ, ತಮಿಳುನಾಡು ಸರ್ಕಾರದ ಬೇಡಿಕೆಯಾದ 12 ಟಿಎಂಸಿ ಬಿಡಲು ಕರ್ನಾಟಕ ಸರ್ಕಾರ ಒಪ್ಪಲೇಬೇಕು. ಕಾವೇರಿ ಉಸ್ತುವಾರಿ ಸಮಿತಿ ಕೂಡಾ ಇದೇ ಆದೇಶವನ್ನು ಕರ್ನಾಟಕಕ್ಕೆ ನೀಡಿದೆ.
ಕಳೆದ ರಾತ್ರಿ ಕಾವೇರಿ ಕೊಳ್ಳದ ತಿರುವರೂರು ಸಮೀಪದ ಗ್ರಾಮವೊಂದರಲ್ಲಿ ಅಬ್ದುಲ್ ರಹೀಂ ಎಂಬ 55 ವರ್ಷ ರೈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಕಾವೇರಿ ನೀರು ಸಿಗದೆ ಬೆಳೆ ಮೇಲೆ ಸಾಲ ಮಾಡಿಕೊಂಡಿದ್ದ ರಹೀಂ ಬೇರೆ ವಿಧಿ ಇಲ್ಲದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸುಮಾರು 14 ಲಕ್ಷ ಎಕರೆ ಭೂಮಿಯಲ್ಲಿ ಬೆಳೆ ನಾಶವಾಗಲಿದೆ. ಕುರುವೈ ಬೆಳೆ ಕೈಕೊಟ್ಟಿದೆ. ಸಾಂಬಾ ಬೆಳೆ ಸಿಗದಿದ್ದರೆ ರೈತರ ಸ್ಥಿತಿ ಊಹಿಸಲು ಸಾಧ್ಯವಿಲ್ಲ ಎಂದು ಪಿಎಂಕೆ ಮುಖ್ಯಸ್ಥ ರಾಮದಾಸ್ ಹೇಳಿದ್ದಾರೆ.












Click it and Unblock the Notifications