ಸಹಸ್ರ ಸಂಖ್ಯೆಯಲ್ಲಿ ಹರಿದು ಬನ್ನಿ: ಜನತೆಗೆ ಬಿಎಸ್ವೈ ಮನವಿ

ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದು ನನ್ನ ಸಂಕಲ್ಪವನ್ನು ಬಲಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
'ಕರ್ನಾಟಕ ರಾಜಕೀಯದಲ್ಲಿ ನವ ಮನ್ವಂತರ' ಒಕ್ಕಣೆಯ ಮೂಲಕ ದಿನಪತ್ರಿಕೆಗಳಲ್ಲಿ ಯಡಿಯೂರಪ್ಪ, ಸಮಾವೇಶದಲ್ಲಿ ಪಾಲ್ಗೊಳ್ಳಲು ಜನತೆಯಲ್ಲಿ ಮನವಿ ಮಾಡಿದ್ದಾರೆ. ದಿನಪತ್ರಿಕೆಗೆ ನೀಡಿದ ಜಾಹೀರಾತಿನ ಹೈಲೈಟ್ಸ್ ಹೀಗಿದೆ:
* ಜೀವನ ಎನ್ನುವುದು ಅನುಭವ. ನಮ್ಮ ಮುಂದಿರುವ ಸವಾಲುಗಳನ್ನು ಸ್ವೀಕರಿಸಿ, ಗುರಿಗಳತ್ತ ಮುನ್ನಡೆಯುವುದು ನಮ್ಮ ಧ್ಯೇಯವಾಗಬೇಕು.
* ನಾಲ್ಕು ದಶಕಗಳ ಹಿಂದೆ ರಾಜ್ಯ ರಾಜಕೀಯಕ್ಕೆ ಕಾಲಿಟ್ಟಾಗ ಮುಖ್ಯಮಂತ್ರಿಯಾಗುತ್ತೇನೆ ಎಂದೂ ಕನಸೂ ಕಂಡಿರಲಿಲ್ಲ
* ನನ್ನ ರಾಜಕೀಯ ಜೀವನದ ಉದ್ದಕ್ಕೂ ಜನರ ಹಿತಾಶಕ್ತಿಗಳ ರಕ್ಷಣೆಯೇ ನನ್ನ ಆದ್ಯತೆಯಾಗಿತ್ತು.
* ನನ್ನ ವಿರೋಧಿಗಳ ಟೀಕೆ, ಷಡ್ಯಂತ್ರ ನನ್ನನ್ನು ದುರ್ಭಲಗೊಳಿಸದೆ ಇನ್ನಿಲ್ಲದಂತೆ ಗಟ್ಟಿಗೊಳಿಸಿದವು.
* ಈಗ ನನ್ನ ರಾಜಕೀಯ ಜೀವನ ಕವಲು ದಾರಿಯಲ್ಲಿದೆ. ಜನಹಿತ ರಕ್ಷಣೆಯ ಬೆಳಕು ನನ್ನ ಕೈಹಿಡಿದು ನಡೆಸಲಿವೆ ಎನ್ನುವ ನಂಬಿಕೆಯಿದೆ.
* ವಿಂಧ್ಯ ಪರ್ವತದ ಈಚೆ ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಹತ್ತು ಹಲವಾರು ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡೆ.
* ಶರಣರು, ಸಂತರು, ಸೂಫಿ, ಗಾಂಧೀಜಿ, ಜೆಪಿ ಮುಂತಾದವರ ಚಿಂತನೆ ನನ್ನ ಹಿಂದಿನ ಬೆಳಕು.
* ಬಿಜೆಪಿ ದುಷ್ಟಕೂಟದ ಚದುರಂಗದಾಟಕ್ಕೆ ನಾನು ಹೇಗೆ ದಾಳವಾದೆ ಎಂದು ನೀವೆಲ್ಲಾ ನೋಡಿದ್ದೀರಿ.
* ಅದನ್ನೆಲ್ಲ ಮರೆತು 'ಕರ್ನಾಟಕ ಜನತಾ ಪಕ್ಷ' ಹುಟ್ಟು ಹಾಕಿದ್ದೇನೆ.
* ಕೆಜೆಪಿಯನ್ನು ಪ್ರಾದೇಶಿಕ ಪಕ್ಷವೆಂದು ಕೆಲವರು ಕರೆದರೂ ಅದಕ್ಕೆ ರಾಷ್ಟ್ರೀಯ ದೃಷ್ಟಿಕೋನವಿದೆ.
* ಡಿಸೆಂಬರ್ 9ರಂದು ಹಾವೇರಿಯಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲಿ ಅಧ್ಯಕ್ಷನಾಗಿ ಚುಕ್ಕಾಣಿ ಹಿಡಿಯಲಿದ್ದೇನೆ.
* ಸಮಾವೇಶದಲ್ಲಿ ಭಾಗವಹಿಸಬೇಕೆಂದು ನಿಮ್ಮಲ್ಲಿ ಕಳಕಳಿಯ ಪ್ರಾರ್ಥನೆ.












Click it and Unblock the Notifications