ರಾಜಕೀಯ ಮೇಲಾಟ : ಒಂದೇ ಶಾಲೆ 2ಬಾರಿ ಉದ್ಘಾಟನೆ

ಸರ್ವಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ನಾಯಿಂಡಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಬಿಜೆಪಿಯ ಪಾಲಿಕೆ ಸದಸ್ಯೆ ರಾಜೇಶ್ವರಿ ಮತ್ತು ಗೋವಿಂದರಾಜನಗರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಒಂದೇ ದಿನ ಎರಡು ಬಾರಿ ಉದ್ಘಾಟಿಸಿ ಕೃತಾರ್ಥರಾದರು.
ಶಾಲೆಯ ಕಾಮಗಾರಿ ಇನ್ನೂ ಮುಗಿದಿರಲಿಲ್ಲ, ಆದರೂ ಶಾಸಕ ಪ್ರಿಯಾಕೃಷ್ಣ ಉದ್ಘಾಟನೆಗೆ ದಿನ ಮತ್ತು ಸಮಯ ನಿಗದಿ ಪಡಿಸಿದ್ದರು. ಇದನ್ನರಿತ ಸ್ಥಳೀಯ ಕಾರ್ಪೊರೇಟರ್ ಎಚ್ ಎಸ್ ರಾಜೇಶ್ವರಿ ಶಾಸಕರು ಬರುವ ಮುನ್ನವೇ ಟೇಪ್ ಕತ್ತರಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ನಿಗದಿ ಪಡಿಸಿದ್ದ ಸಮಯಕ್ಕೆ ಸರಿಯಾಗಿ ಬಂದಿದ್ದ ಪ್ರಿಯಾಕೃಷ್ಣಗೆ ಕಟ್ಟಡ ಉದ್ಘಾಟನೆ ಆದ ವಿಷಯ ತಿಳಿಯಿತು. ಆದರೂ ಕ್ಯಾರೇ ಅನ್ನದೆ ತನ್ನ ಅಸಂಖ್ಯಾತ ಬೆಂಬಲಿಗರೊಂದಿಗೆ ಮತ್ತೊಮ್ಮೆ ಟೇಪು ತರಿಸಿ ಅದನ್ನು ಕತ್ತರಿಸಿ ಉದ್ಘಾಟಿಸಿದರು.
ನೆರೆದಿದ್ದ ಸಾವಜನಿಕರು ಒಂದು ಕಡೆ ಮುಸಿಮುಸಿ ನಗುತ್ತಿದ್ದರೆ, ಇನ್ನೊಂದೆಡೆ ಶಾಲೆಯ ವಿಚಾರದಲ್ಲೂ ರಾಜಕೀಯ ನಾಯಕರು 'ರಾಜಕೀಯ' ಮಾಡುವುದು ಬಿಡುವುದಿಲ್ಲವಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು.
ಸರ್ವಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ಸರಕಾರದಿಂದ 86.57 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಪ್ರಿಯಾಕೃಷ್ಣ 25 ಲಕ್ಷ ಅನುದಾನ ನೀಡಿ ಕಟ್ಟಡ ಉದ್ಘಾಟನೆ ನಡೆಸುವುದು ಎಷ್ಟು ಸೂಕ್ತ ಎಂದು ಬಿಜೆಪಿ ಪಾಲಿಕೆ ಸದಸ್ಯೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಉದ್ಘಾಟನೆಗೆ ಸಮಯ ನಿಗದಿ ಪಡಿಸಿದ್ದು. ಸ್ಥಳೀಯ ಶಾಕರನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಇನ್ನೇನು ಮಾಡಾಕಾಗುತ್ತೆ ಎಂದು ಪ್ರಿಯಾಕೃಷ್ಣ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications