ನಾಲೆಯಲ್ಲಿ ಮುಳುಗಿ ಬೆಂಗಳೂರಿನ ಅಯ್ಯಪ್ಪ ಭಕ್ತರ ಸಾವು

ಮೃತಪಟ್ಟವರು ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ ಸತೀಶ್(33) ಹಾಗೂ ದೊಡ್ಡಕಲಸಂದ್ರದ ವೀರೇಂದ್ರಕುಮಾರ್(31) ಎಂದು ಗುರುತಿಸಲಾಗಿದೆ.
ಮೃತರು ಸೇರಿದಂತೆ ಏಳು ಮಂದಿ ಅಯ್ಯಪ್ಪ ವ್ರತಧಾರಿಗಳ ತಂಡ ನವೆಂಬರ್ 30ರಂದು ಬೆಂಗಳೂರಿನಿಂದ ಶಬರಿ ಮಲೆ ಪ್ರವಾಸಕ್ಕೆ ಖಾಸಗಿ ವಾಹನದಲ್ಲಿ ತೆರಳಿದ್ದರು. ಅಯ್ಯಪ್ಪಸ್ವಾಮಿಯ ದೇವರ ದರ್ಶನ ಪಡೆದು ಮತ್ತೆ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯದ ನಂಜನಗೂಡು-ಗುಂಡ್ಲುಪೇಟೆ ರಸ್ತೆಯ ಕಳಲೆ ಬಳಿಯ ನಾಲೆಯಲ್ಲಿ ಬೆಳಿಗ್ಗೆ 8.30ರ ಸಮಯದಲ್ಲಿ ಸ್ನಾನ ಮಾಡಲು ತೆರಳಿದ್ದಾರೆ.
ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿ ಸತೀಶ್ ಆಕಸ್ಮಿಕವಾಗಿ ಮುಳುಗಿದ್ದಾರೆ. ಅವರನ್ನು ಉಳಿಸಲು ಹೋದ ವಿರೇಂದ್ರಕುಮಾರ್ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ಉಳಿದ ಐವರು ರಕ್ಷಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗದೆ ಅವರಿಬ್ಬರು ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಸತೀಶ ಎಂಬಾತನ ಶವ ಸುಮಾರು ಇನ್ನೂರು ಮೀಟರ್ ದೂರದಲ್ಲಿ ಸಿಕ್ಕಿದ್ದು, ವಿರೇಂದ್ರ ಕುಮಾರ್ ಶವಕ್ಕಾಗಿ ಪೊಲೀಸರು ಶೋಧನೆ ಕೈಗೊಂಡಿದ್ದಾರೆ ಇವರಿಬ್ಬರು ವಿಗಾರ್ಡ್ ಕಂಪನಿಯ ಸಿಬ್ಬಂದಿಯಾಗಿದ್ದಾರೆಂದು ಹೇಳಲಾಗಿದೆ.
ಸ್ಥಳಕ್ಕೆ ಸಿಪಿಐ ಸಿ.ಎಸ್.ರಘು, ಪಿಎಸ್ಐ ಹನುಮಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸತೀಶನ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿರೇಂದ್ರಕುಮಾರ್ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.












Click it and Unblock the Notifications