ಶ್ರೀ ಸತ್ಯಾತ್ಮತೀರ್ಥರಿಗೆ 60 ಕೆಜಿ ನಾಣ್ಯ ಸಮರ್ಪಣೆ
ಸವಣೂರ, ನ. 22 : ಶ್ರೀಮದ್ ಉತ್ತರಾಧಿಮಠದ ಪರಂಪರೆಯಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದುಕೊಂಡಿರುವ ಶ್ರೀ ಸತ್ಯಧರ್ಮತೀರ್ಥರ ಮೃತ್ತಿಕಾ ವೃಂದಾವನವನ್ನು ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಬುಧವಾರ ಪ್ರತಿಷ್ಠಾಪಿಸಲಾಯಿತು. ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ಅಮೃತೋಪದೇಶ ನೀಡಿದ ಶ್ರೀ ಸತ್ಯಾತ್ಮತೀರ್ಥರು, ಮಹಾನ್ ತಪಸ್ವಿ, ಜ್ಞಾನಿ ಹಾಗೂ ವೈರಾಗ್ಯಶಾಲಿಗಳಾದ ಸತ್ಯಧರ್ಮತೀರ್ಥರ ಮೃತ್ತಿಕಾ ವೃಂದಾವನ ಸ್ಥಾಪನೆ ಮಂಗಳಕರ. ಶ್ರೀ ಸತ್ಯಬೋಧರು ಹಾಗೂ ಶ್ರೀ ಸತ್ಯಧರ್ಮರ ಸನ್ನಿಧಾನದಲ್ಲಿ ವಿಶೇಷವಾದ ಪಾಠ ಪ್ರವಚನಗಳು, ಜ್ಞಾನಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಸೈದ್ಧಾಂತಿಕ ಸಮಸ್ಯೆಗಳಿಗೆ ತಮ್ಮ ದಿವ್ಯ ಪಾಂಡಿತ್ಯದ ಮೂಲಕ ಪರಿಹಾರ ನೀಡುತ್ತಿದ್ದ ಶ್ರೀ ಸತ್ಯಧರ್ಮತೀರ್ಥರು ಧರ್ಮಸಾಮ್ರಾಜ್ಯದಲ್ಲಿ ವಿಶಿಷ್ಠವಾದ ಸ್ಥಾನವನ್ನು ಹೊಂದಿದ್ದಾರೆ. ಗುರುಗಳ ನಾಮಸ್ಮರಣೆಯಿಂದಲೇ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಅನೇಕ ವಾಖ್ಯಾನಗಳನ್ನು, ಹತ್ತಾರು ಗ್ರಂಥಗಳಿಗೆ ಸಮರ್ಥನೆಗಳನ್ನು ನೀಡಿರುವ ಶ್ರೀ ಸತ್ಯಧರ್ಮರು, ಅದ್ಬುತವಾದ ಶಬ್ದ ಜ್ಞಾನವನ್ನೂ ಹೊಂದ್ದಿದರು ಎಂದು ಶ್ರೀಗಳು ನುಡಿದರು.
ಸತ್ಯಧರ್ಮತೀರ್ಥರು ಶಬ್ದಗಳನ್ನು ರತ್ನಗಳಂತೆ ಜೋಡಿಸುತ್ತಿದ್ದರು. ನೈಜವಾದ ರತ್ನಗಳ ಜೋಡಣೆಯಲ್ಲಿಯೂ ಪರಿಣಿತರಾಗಿದ್ದರು. ತೈಲ ಚಿತ್ರ ರಚನೆ, ಶಿಲ್ಪಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದ್ದಿದರು. ಅನೇಕ ದೇವಸ್ಥಾನಗಳ ಜೀರ್ಣೋದ್ದಾರ ಕೈಗೊಂಡಿದ್ದರು. ದೇವರಿಗೆ ರತ್ನ ಖಚಿತವಾದ ಮಂಟಪವನ್ನು ನಿರ್ಮಾಣಗೊಳಿಸಿದ್ದರು ಎಂದು ಶ್ರೀಗಳು ಗುರುಸ್ಮರಣೆ ಮಾಡಿದರು.
ಶ್ರೀ ಸುಧಾ ಗ್ರಂಥದ ಮೂರು ಹಸ್ತಪ್ರತಿಗಳನ್ನು ರಚಿಸಿದ ಗುರುಗಳ ಶ್ರದ್ಧೆಯನ್ನು ಸ್ಮರಿಸಿಕೊಂಡ ಶ್ರೀಗಳು, ಸುಧಾ ಗ್ರಂಥದೊಂದಿಗೆ ಮೈಸೂರು ಅರಸರನ್ನು ಅನುಗ್ರಹಿಸಿದ, ಶಾಶ್ವತವಾದ ಸಂಪತ್ತನ್ನು ಕರುಣಿಸಿದ ಶ್ರೀ ಸತ್ಯಧರ್ಮರ ಕಾರುಣ್ಯವನ್ನು ಪರಿಚಯಿಸಿದರು.
ಸತ್ಯಾತ್ಮರ ಪಾದಪೂಜೆ ನೆರವೇರಿಸಿದ ಭಕ್ತವೃಂದ, ತಪ್ತಮುದ್ರಾಧಾರಣೆ ಹೊಂದುವ ಮೂಲಕ ಸಾರ್ಥಕ್ಯಭಾವ ಅನುಭವಿಸಿದರು. ಬಳಿಕ ಶ್ರೀ ಅಹೋಬಲ ಲಕ್ಷ್ಮಿನರಸಿಂಹ ದೇವರ ಸನ್ನಿಧಿ, ಶ್ರೀ ಸತ್ಯಬೋಧ ತೀರ್ಥರ ಮೂಲವೃಂದಾವನಗಳಿಗೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಕೈಗೊಳ್ಳಲಾಯಿತು.
ದಿಗ್ವಿಜಯ ಮೂಲರಾಮಚಂದ್ರ ದೇವರ ಮಹಾಪೂಜೆ ನೆರವೇರಿಸಿದ ಸತ್ಯಾತ್ಮತೀರ್ಥರಿಗೆ, 60 ಕೆ.ಜಿ ತೂಕದ ನಾಣ್ಯಗಳನ್ನು ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಅವರು ಸಮರ್ಪಿಸಿದರು. ಪಾಲ್ಗೊಂಡಿದ್ದ ಭಕ್ತವೃಂದಕ್ಕೆ ತೀರ್ಥ ಪ್ರಸಾದ ವಿತರಣೆ ಕೈಗೊಳ್ಳಲಾಯಿತು. ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಮೋಹನಾಚಾರ್ಯ ರಾಯಚೂರ ಸೇರಿದಂತೆ ನಗರದ ಹಲವಾರು ಪ್ರಮುಖರು, ಶ್ರೀಮಠದ ಶಿಷ್ಯವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸವಣೂರಿನ ಶ್ರೀ ವಿಷ್ಣುತೀರ್ಥ ಪುಷ್ಕರಣಿಗೂ ಸತ್ಯಾತ್ಮತೀರ್ಥರು ಭೆಟ್ಟಿ ನೀಡಿದರು.