ಕಸಬ್ ಗಲ್ಲಾಯಿತು, ಸರಬ್ಜಿತ್ ಸಿಂಗ್ ಗತಿಯೇನು?
ಅದು, ಪಾಕಿಸ್ತಾನದ ಜೈಲಿನಲ್ಲಿ ಬಂದಿಯಾಗಿರುವ ಭಾರತದ ನಾಗರಿಕ ಸರಬ್ಜಿತ್ ಸಿಂಗ್ ಕುಟುಂಬ. ಸರಬ್ಜಿತ್ಗೆ ಕೂಡ ಪಾಕಿಸ್ತಾನದ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದು, 22 ವರ್ಷಗಳಿಂದ ಜೈಲಲ್ಲಿ ಕಾಲ ಕಳೆದಿರುವ 49 ವರ್ಷದ ಸರಬ್ಜಿತ್ ಸಲ್ಲಿಸಿರುವ ಕ್ಷಮಾದಾನ ಪತ್ರ ಇನ್ನೂ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರ ಟೇಬಲ್ ಮೇಲಿದೆ.
1990ರಲ್ಲಿ ಲಾಹೋರ್ ಮತ್ತು ಫೈಸಲಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 14 ಜನರು ಹತರಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸರಬ್ಜಿತ್ ಸಿಂಗ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಕೋಟ್ ಲಖಪತ್ ಜೈಲಿನಲ್ಲಿ ಇಡಲಾಗಿದೆ.
ಪಾಕ್ ಭಯೋತ್ಪಾದಕ ಕಸಬ್ನನ್ನು ಗಲ್ಲಿಗೇರಿಸಿರುವುದು, ಕಳೆದ 22 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ಮೇಲೆಯೂ ಪರಿಣಾಮ ಬೀರಬಹುದು ಎಂದು ಪಾಕಿಸ್ತಾನದ ರಾಷ್ಟ್ರಪತಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಭಾರತದ ನ್ಯಾಯಾಂಗವನ್ನು ನಾವು ಗೌರವಿಸುತ್ತೇವೆ. ಎಲ್ಲವೂ ಕಾನೂನಿಗೆ ಅನುಗುಣವಾಗಿಯೇ ನಡೆದಿದೆ ಎಂದು ನಂಬಿದ್ದೇವೆ. ಕೊನೆಯ ಕ್ಷಣದವರೆಗೆ ಕಸಬ್ಗೆ ಕ್ಷಮಾದಾನ ನೀಡುವ ಪರವಾಗಿಯೇ ಇದ್ದ ಭಾರತದ ರಾಷ್ಟ್ರಪತಿ ಪ್ರಣಬ್, ಒತ್ತಡಕ್ಕೆ ಮಣಿದು ಕ್ಯೂ ಜಂಪ್ ಮಾಡಿ ಕ್ಷಮಾದಾನ ತಿರಸ್ಕರಿಸಿದ್ದಾರೆ. ಇದರ ದುಷ್ಪರಿಣಾಮ ಸರಬ್ಜಿತ್ ಮೇಲಾಗುವುದನ್ನು ತಳ್ಳಿಹಾಕಲಾಗುವುದಿಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಲಿಬಾನ್ ಕಮಾಂಡರುಗಳು ಕೂಡ ಕಸಬ್ನನ್ನು ಗಲ್ಲಿಗೇರಿಸಿರುವುದು ಮತ್ತಷ್ಟು ಭಯೋತ್ಪಾದಕ ದಾಳಿಗಳಿಗೆ ಉತ್ತೇಜನ ನೀಡಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಕಸಬ್ ಒಬ್ಬ 'ಹೀರೋ' ಎಂದು ಬಣ್ಣಿಸಿರುವ ತಾಲಿಬಾನಿ ಕಮಾಂಡರುಗಳು, ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಭಾರತ ಸರಕಾರ ಈ ಬಗ್ಗೆ ಚಿಂತನೆ ನಡೆಸಿದೆಯೆ?