ಗಲ್ಲಿಗೇರುವ ಮುನ್ನ 'ಅಲ್ಲಾ ನನ್ನ ಕ್ಷಮಿಸು' ಎಂದ ಕಸಬ್
ನೀಚ ಉಗ್ರರ ಗುಂಡಿಗೆ ಪ್ರಾಣತೆತ್ತ ಸಂದೀಪ್ ಉನ್ನಿಕೃಷ್ಣನ್ ಅವರ ಮನೆಯಲ್ಲಿ ನಂದಿರುವ ನಂದಾದೀಪ ಮತ್ತೆ ಹೊತ್ತಿಕೊಳ್ಳುವಂತಾಗಲಿ ಎಂದು ಜನ ಆಶಿಸಿದ್ದಾರೆ.
ಈ ಮಧ್ಯೆ ಕಸಬ್ ದೇಹವನ್ನು ಮುಂಬೈನ ಆರ್ಥರ್ ಜೈಲಿಗೆ ವಾಪಸು ತರಲಾಗುತ್ತಿದೆ. ಅದಾದ ನಂತರ ಪಾಕಿಸ್ತಾನದಲ್ಲಿರುವ ಅವನ ಹುಟ್ಟೂರಿಗೆ ಶವವನ್ನು ಸಾಗಿಸುವ ಅಂದಾಜಿದೆ.
ಆದರೆ ಕಸಬ್ ಗೆ ಮರಣದಂಡನೆ ವಿಧಿಸುರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪಾತಕಿ ಕಸಬ್ ನ ಶವವನ್ನು ತಾನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಶವವನ್ನು ಸ್ವೀಕರಿಸಿದ್ದೇ ಆದರೆ ಕಸಬ್ ತನ್ನವನೆಂದು ಒಪ್ಪಿಕೊಂಡಂತಾಗುತ್ತದೆ ಎಂಬುದು ಕಸಬ್ ನಂತಹ ಆತಂಕವಾದಿಗಳನ್ನು ಸೃಷ್ಟಿಸುವ ಪಾಕಿಸ್ತಾನದ ಆತಂಕವಾಗಿದೆ.
ಇನ್ನೆಂದೂ ಇಂಥ ತಪ್ಪು ಮಾಡೊಲ್ಲ. ಅಲ್ಲಾ ನನ್ನ ಕ್ಷಮಿಸು: 26/11ರ ಮುಂಬೈ ದಾಳಿಕೋರನ್ನು ಗಲ್ಲಿಗೇರಿಸುವ ಮುಂದೆ ಸಹಜವಾಗಿಯೇ ನಿನ್ನೆ 'ಅಂತಿಮ ಇಚ್ಛೆ' ಏನು ಕೇಳಲಾಗಿ, 'ಅಂಥದ್ದೇನೂ ಇಲ್ಲ. ನನಗೆ ಯಾವುದೇ ಆಸೆಗಳಿಲ್ಲ' ಎಂದು ಗೋಣುಚೆಲ್ಲಿದ್ದಾನೆ. ಆದರೆ 'ಇನ್ನೆಂದಿಗೂ ಇಂತಹ ತಪ್ಪು ಮಾಡುವುದಿಲ್ಲ. ಅಲ್ಲಾ ನನ್ನ ಕ್ಷಮಿಸು' ಎಂದು ಉದ್ಘರಿಸಿದ್ದಾನೆ.
ಅತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಿಟ್ಟ ನಿರ್ಧಾರಕ್ಕೆ ಬಂದು ಕಸಬ್ ಗೆ ಗಲ್ಲು ವಿಧಿಸಿ ಎಂದು ಅಂಕಿತ ಹಾಕುತ್ತಿದ್ದಂತೆ ಮಹಾರಾಷ್ಟ್ರ ಸರಕಾರ ಹೆಚ್ಚು ಸಮಯ ಹಾಳು ಮಾಡದೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಅಷ್ಟೇ ಗೌಪ್ಯವಾಗಿ ಅವನನ್ನು ಗಲ್ಲಿಗೇರಿಸಿದೆ. ಈ ಪ್ರಕ್ರಿಯೆಯಲ್ಲಿ ಕಾನೂನಿನಂತೆ ಎಲ್ಲ ಶಿಷ್ಟಾಚಾರವನ್ನೂ ಪಾಲಿಸಲಾಗಿದೆ ಎಂದು ಮುಂಬೈ ಮೂಲಗಳು ತಿಳಿಸಿವೆ.
ಸದ್ಯಕ್ಕೆ ಕಸಬ್ ಹೆಣ ಉರುಳಿದೆ. ಮುಂದಿನದು ಮುಂದಿನ ಮಾತು...