ಬಿಜೆಪಿ ಆಂತರಿಕ ಕಚ್ಚಾಟ: ಜ್ಯೂ. ಜೇಠ್ಮಲಾನಿ ಔಟ್

ಹಣಕಾಸು ಅವ್ಯವಹಾರದಲ್ಲಿ ತೊಡಗಿರುವ ನಿತಿನ್ ಗಡ್ಕರಿ ಕೈ ಕೆಳಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ರಾಷ್ಟ್ರೀಯ ಕಾರ್ಯಕಾರಣಿಗೆ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರ ಪುತ್ರ ಮಹೇಶ್ ಜೇಠ್ಮಲಾನಿ ಸೋಮವಾರ (ನ.5) ರಾಜೀನಾಮೆ ನೀಡಿದ್ದಾರೆ.
ನಿತಿನ್ ಗಡ್ಕರಿ ಅಧ್ಯಕ್ಷರಾಗಿ ಮುಂದುವರೆಯುವ ತನಕ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನೈತಿಕವಾಗಿ, ಬೌದ್ಧಿಕವಾಗಿ ಮುಂದುವರೆಯಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಹೇಶ್ ಹೇಳಿದ್ದಾರೆ.
ಗಡ್ಕರಿ ಅವರು ಎರಡನೇ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಅಕ್ಟೋಬರ್ 23 ರಂದು ರಾಮ್ ಜೇಠ್ಮಲಾನಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಲ್ಲದೆ, ಗಡ್ಕರಿ ಅವರ ಅಕ್ರಮಗಳ ಬಗ್ಗೆ ಅರವಿಂದ್ ಕೇಜ್ರಿವಾಲ ನಡೆಸಿದ ಸುದ್ದಿಗೋಷ್ಠಿಗೆ ರಾಮ್ ಜೇಠ್ಮಲಾನಿ ಅವರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು.
ಮಹಾರಾಷ್ಟ್ರ ಭೂ ಹಗರಣದಲ್ಲಿ ಆರೋಪಿಯಾಗಿರುವ ನಿತಿನ್ ಗಡ್ಕರಿ ಅವರನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲು ಹೇಗೆ ಸಾಧ್ಯ ಎಂದು ರಾಮ್ ಜೇಠ್ಮಲಾನಿ ಪ್ರಶ್ನಿಸಿದ್ದರು.
ಸುಮಾರು 70 ಸಾವಿರ ಕೋಟಿ ರು ನೀರಾವರಿ ಹಗರಣದಲ್ಲಿ ನಿತಿನ್ ಗಡ್ಕರಿ ಅವರು ಭಾಗಿಯಾಗಿದ್ದಾರೆ.
ಗಡ್ಕರಿ ಟ್ರಸ್ಟ್ ಹೆಸರಿನಲ್ಲಿ 100 ಎಕರೆ ಭೂಮಿಗೆ ಅಕ್ರಮವಾಗಿ ನೀರು ಹರಿಸಲಾಗಿದೆ. ವಿದರ್ಭ ರೈತರ ಆತ್ಮಹತ್ಯೆ ಹಿಂದೆ ಈ ಭಾರಿ ನೀರಾವರಿ ಹಗರಣವೇ ಕಾರಣ ಎಂದು ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಕಾರ್ಯಕರ್ತೆ ಅಂಜಲಿ ದಾಮಾನಿಯಾ, ಕೇಜ್ರಿವಾಲ ಮತ್ತು ಪ್ರಶಾಂತ್ ಭೂಷಣ್ ಅವರು ಅಕ್ಟೋಬರ್ 17 ರಂದು ಆರೋಪಿಸಿದ್ದರು.
ಬುದ್ಧಿಮತ್ತೆ ವಿಷಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಪಾತಕಿ ದಾವೂದ್ ಇಬ್ರಾಹಿಂ ಇಬ್ಬರದೂ ಒಂದೇ ತೂಕ. ಆದರೆ ವಿವೇಕಾನಂದರು ತಮ್ಮ ಬುದ್ಧಿಯನ್ನು intelligence quotient -IQ) ಸಕಾರಾತ್ಮಕವಾಗಿ/ರಚನಾತ್ಮಕವಾಗಿ ಬಳಸಿಕೊಂಡರು. ಪಾತಕಿ ದಾವೂದ್ ಮಾತ್ರ ದೃಷ್ಕೃತ್ಯಗಳಿಗೆ ಬಳಸಿಕೊಂಡು' ಎಂದು ಗಡ್ಕರಿ ವಿಷಾದಿಸಿದ್ದರು.
ಗಡ್ಕರಿ ಹೇಳಿಕೆ ಬಗ್ಗೆ ಸಹಜವಾಗೇ ಅಪಸ್ವರಗಳು ಕೇಳಿ ಬಂದಿದೆ. ಅದಕ್ಕೆ ಗಡ್ಕರಿ ಇದಕ್ಕೆ ಕೊಟ್ಟ ಪ್ರತಿಕ್ರಿಯೆ ಸಮರ್ಪಕವಾಗಿಲ್ಲ. ತಮ್ಮ ಮೇಲಿನ ಆರೋಪಗಳನ್ನು ನಿತಿನ್ ಗಡ್ಕರಿ ಸಮರ್ಥಿಸಿಕೊಳ್ಳುವ ರೀತಿ ಬೇಸರ ಹುಟ್ಟಿಸುತ್ತದೆ ಎಂದು ಮಹೇಶ್ ಹೇಳಿದ್ದಾರೆ.












Click it and Unblock the Notifications