ಯಡಿಯೂರಪ್ಪ ಕತ್ತೆ: 'ಉನ್ನತ ಶಿಕ್ಷಣ' ಸಚಿವ ರವಿ ಸಮರ್ಥನೆ

'ಒಂದೂರಲ್ಲಿ ಒಂದು ಕತ್ತೆ ಇತ್ತು. ಅದರ ಮೇಲೆ ದೇವರ ಮೂರ್ತಿಯನ್ನು ಇಟ್ಟು ಜನ ಪೂಜೆ ಮಾಡುತ್ತಿದ್ದರು' ಎಂದೆಲ್ಲ ನೀತಿ ಕಥೆ ಬೋಧಿಸಿದ್ದ ಶಿಕ್ಷಣ ಸಚಿವ ರವಿ ಸರ್, ಬಾಯಿ ಜಾರಿ ಹಾಗೆ ಹೇಳಿದ್ದಿರಬಹುದು ಎಂದು ಯಡಿಯೂರಪ್ಪ ಅಭಿಮಾನಿಗಳು ಆಶಿಸುತ್ತಿದ್ದ ಸಂದರ್ಭದಲ್ಲೇ, ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನೋಡ್ತಿರಿ, ಮಾಜಿ ಸಿಎಂ ಯಡಿಯೂರಪ್ಪ ಪರವಾಗಿ ಮಾತನಾಡುತ್ತಿರುವವರು ಮುಂದಿನ ದಿನಗಳಲ್ಲಿ ಅವರಿಂದ ದೂರವಾಗುತ್ತಾರೆ ಎಂದಿದ್ದಾರೆ.
ಯಡಿಯೂರಪ್ಪನ ಜತೆಗೆ ನಾವೂ ಕತ್ತೆಗಳೇ!: ಯಡಿಯೂರಪ್ಪನವರು ಕಷ್ಟದಲ್ಲಿದ್ದಾಗ ಪಕ್ಷ ಹಾಗೂ ನಾವು ಅವರ ಜತೆಗಿದ್ದೆವು. ಇದೆಲ್ಲ ಅವರಿಗೂ ಗೊತ್ತಿದೆ. ಎಲ್ಲ ರೀತಿಯ ಸ್ಥಾನ ಮಾನ ನೀಡಿರುವ ಪಕ್ಷವನ್ನು ಅವರು ತೊರೆಯುವುದಿಲ್ಲ ಎಂಬ ಆಶಾಭಾವವೂ ಇದೆ ರವಿ ಸರ್ ಸುದ್ದಿಗಾರರಿಗೆ ತಿಳಿಸಿದರು.
ಯಡಿಯೂರಪ್ಪನವರು ನಮ್ಮೆಲ್ಲರ ನಾಯಕ. ಅವರನ್ನು ನಾನು ಎಂದಿಗೂ ಅವಹೇಳನ ಮಾಡುವುದಿಲ್ಲ. ಆದರೆ ಪಕ್ಷ ನಮಗೆಲ್ಲ ದೇವರ ಸಮಾನ. ಪಕ್ಷದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ. ಅದರ ಭಾರ ಹೊತ್ತಿರುವ ನಾವೆಲ್ಲ ಕತ್ತೆಗಳಿದ್ದಂತೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ.
ಯಡಿಯೂರಪ್ಪನವರು ಈ ಹಿಂದೆ ಚುನಾವಣೆಗಳಲ್ಲಿ ಸೋತಾಗ ಪಕ್ಷ ಯಾವುದೇ ರೀತಿಯಿಂದಲೂ ಅವರನ್ನು ಕೀಳಾಗಿ ನಡೆಸಿಕೊಂಡಿಲ್ಲ. ಬಿಜೆಪಿ ಸರಕಾರ ಬರಲು ಅವರ ಪರಿಶ್ರಮ ಬಹಳಷ್ಟಿದೆ. ಅವರಿಂದಲೇ ನಾವೆಲ್ಲ ಸಚಿವರಾಗಿದ್ದು. ಆದ್ದರಿಂದ ಅವರಿಗೆ ಅವಮಾನವಾಗಿದೆ ಎನ್ನುವುದು ಸರಿಯಲ್ಲ. ನಮ್ಮಂಥ ಕಾರ್ಯರ್ತರ ಭಾವನೆಯನ್ನು ಅವರೂ ಅರ್ಥ ಮಾಡಿಕೊಳ್ಳಲಿ ಎಂದು ಸಿಟಿ ರವಿ ಹೇಳಿದ್ದಾರೆ.












Click it and Unblock the Notifications