RSS ಮೌನದ ಮಧ್ಯೆ ಗಡ್ಕರಿ ಹೂಡಿಕೆ ತನಿಖೆಗೆ

ಮುಖ್ಯವಾಗಿ ಬೇನಾಮಿ ಕಂಪನಿಗಳ ಮೂಲಕ ನಿತಿನ್ ಗಡ್ಕರಿ ಭಾರಿ ಹೂಡಿಕೆ ಮಾಡಿದ್ದಾರೆ ಎಂಬ ಗುಮಾನಿಯೆದ್ದಿರುವ ಈ ಘಳಿಗೆಯಲ್ಲಿ ಆ ಕಂಪನಿಗಳ ಬಗ್ಗೆ ಕಂಪನಿ ವ್ಯವಹಾರಗಳ ಖಾತೆ ಸಚಿವ ಮೊಯ್ಲಿ ಆಮೂಲಾಗ್ರ ತನಿಖೆಗೆ ಆದೇಶಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನೀರಾವರಿ ಹಗರಣದಲ್ಲಿ ಗಡ್ಕರಿ ಹೆಸರು ಕೇಳಿಬಂದ ಬೆನ್ನಿಗೆ ಪೊರ್ತಿ ಗ್ರೂಪ್ ವ್ಯವಹಾರದ (Purti Power and Sugar Ltd) ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ 20 ಕಂಪನಿಗಳ ಪೈಕಿ 18 ಕಂಪನಿಗಳು ಅಸ್ತಿತ್ವದಲ್ಲೇ ಇಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕುತೂಹಲದ ಸಂಗತಿಯೆಂದರೆ ಗಡ್ಕರಿಯ ಕಾರ್ ಚಾಲಕ ಮನೋಹರ ಪಾನ್ಸೆ, ಅಕೌಂಟೆಂಟ್ ಕ್ವಾಡು ಜೇಡ್ ಮತ್ತು ಆಪ್ತ ಜ್ಯೋತಿಷಿ ಈ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ.
ಒಂದು ಮೂಲಕ 100ಕ್ಕೂ ಹೆಚ್ಚು ಸಣ್ಣಪುಟ್ಟ, ಬೇನಾಮಿ ಕಂಪನಿಗಳು ಗಡ್ಕರಿಯ ಪೊರ್ತಿ ಕಂಪನಿಗಳಿಗೆ ಹಣಕಾಸು ಸರಬರಾಜು ಮಾಡುತ್ತಿದ್ದವು ಎನ್ನಲಾಗಿದೆ.
ಗಡ್ಕರಿ ಅವರು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿದ್ದಾಗ 1995 ಮತ್ತು 1999 ರ ನಡುವೆ ಗುತ್ತಿಗೆಗಳನ್ನು ಪಡೆದಿರುವ ಐಡಿಯಲ್ ರೋಡ್ ಬಿಲ್ಡರ್ ಗ್ರೂಪ್ನಂತಹ ನಿರ್ಮಾಣ ಕಂಪನಿ, ಪೂರ್ತಿ ಪವರ್ಗೆ ಬೃಹತ್ ಮೊತ್ತದ ಸಾಲವನ್ನು ಮತ್ತು ಹೂಡಿಕೆಯನ್ನು ಮಾಡಿದೆ ಎಂದು Times Of India ಪತ್ರಿಕೆಯ ತನಿಖೆಯ ಮೂಲಕ ತಿಳಿದುಬಂದಿದೆ.
ಗಡ್ಕರಿ ಬೆಂಬಲಕ್ಕೆ ಆಡ್ವಾಣಿ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಉದ್ಯಮ ಸಂಸ್ಥೆಗಳ ವ್ಯವಹಾರಗಳ ಬಗೆಗೆ ಭಾರೀ ಅಪಸ್ವರಗಳು ಕೇಳಿ ಬಂದಿರುವ ನಡುವೆಯೇ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಅವರು ಪಕ್ಷದ ರಾಷ್ಟ್ರಾಧ್ಯಕ್ಷರ ಪರ ಮಾತನಾಡಿದ್ದಾರೆ. ಆದರೆ ಭ್ರಷ್ಟಾಚಾರದ ವಿಚಾರದಲ್ಲಿ ಪಕ್ಷ ಯಾವುದೇ ರಾಜಿ ಮಾಡಿಕೊಳ್ಳದು ಎಂದೂ ಹೇಳಿದ್ದಾರೆ.
ನಿತಿನ್ ಗಡ್ಕರಿ ಅವರು ತಮ್ಮ ವಿರುದ್ಧದ ಆರೋಪಗಳ ಸಂಬಂಧ ತನಿಖೆ ನಡೆಸುವಂತೆ ಕಂಪನಿ ವ್ಯವಹಾರಗಳ ಇಲಾಖೆಯನ್ನು ಕೋರಿಕೊಂಡಿದ್ದು, ಈ ಮೂಲಕ ಅವರ ತಮ್ಮ ಸ್ವಚ್ಛ ಜೀವನವನ್ನು ಎತ್ತಿಹಿಡಿದಿದ್ದಾರೆ. ಇದು ಅತ್ಯಂತ ಸೂಕ್ತ ಹಾಗೂ ನ್ಯಾಯಸಮ್ಮತವಾದ ಹೆಜ್ಜೆಯಾಗಿದೆ ಎಂದವರು ಹೇಳಿದರು.
ನಿತಿನ್ ಗಡ್ಕರಿ ವಿರುದ್ಧದ ಆರೋಪಗಳೆಲ್ಲವೂ ಉದ್ಯಮ ಕ್ಷೇತ್ರದ ಮಾನದಂಡದ ಪಾಲನೆಗೆ ಸಂಬಂಧಿಸಿದವುಗಳಾಗಿವೆಯೇ ಹೊರತು ಇವು, ಭ್ರಷ್ಟಾಚಾರ ಅಥವಾ ಅಧಿಕಾರದ ದುರುಪಯೋಗಕ್ಕೆ ಸಂಬಂಧಿಸಿದವುಗಳಲ್ಲ ಎಂದವರು ಹೇಳಿದರು.
ತನ್ನ ಅಭೂತಪೂರ್ವ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನವಾಗಿ ಯುಪಿಎ ಸರಕಾರ, ಗಡ್ಕರಿ ವಿರುದ್ಧದ ಆರೋಪಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ ಆಡ್ವಾಣಿ, ಎಲ್ಲಾ ಆರೋಪಗಳ ಬಗೆಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.












Click it and Unblock the Notifications