ರಾಹುಲ್ ಗಾಂಧಿಗಾಗಿ ವಿಶೇಷ ಕುರ್ಚಿ ರೆಡಿ!
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ಸಚಿವ ಸಂಪುಟ ಸೇರ್ಪಡೆಯಾಗುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಅತ್ಯಗತ್ಯ ಎನ್ನಲಾಗಿದೆ. ಪ್ರಧಾನಿ ಪಟ್ಟಕ್ಕೇರುವ ಮೊದಲು ರಾಹುಲ್ ಗಾಂಧಿಯನ್ನು ಹಂತ ಹಂತವಾಗಿ ರಾಜಕೀಯವಾಗಿ ಮೇಲಕ್ಕೇರಿಸುವ ಪ್ರಕ್ರಿಯೆ ಅವಿರತವಾಗಿ ಸಾಗಿದೆ.
2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೇಳಿಕೊಂಡಿದ್ದಾರೆ.
ಯಾವ ಖಾತೆ?: ರಾಹುಲ್ ಗಾಂಧಿ ಅವರ ಸಾಮಾಜಿಕ ಕಳಕಳಿ, ಗ್ರಾಮೀಣಾಭಿವೃದ್ಧಿ ಹಾಗೂ ಯುವಜನ ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗಾಗಿ 'ಸಾಮಾಜಿಕ ಅಭಿವೃದ್ಧಿ' ಎಂಬ ಮೂರ್ನಾಲ್ಕು ಖಾತೆಗಳನ್ನು ಒಗ್ಗೂಡಿಸಿ ಸೃಷ್ಟಿಸಿದ ಹೊಸ ಸೀಟು ನೀಡಲು ಸಿದ್ಧತೆ ನಡೆದಿದೆ.
ಸಾಮಾಜಿಕ ಅಭಿವೃದ್ಧಿ ಖಾತೆಯಲ್ಲಿ ಸಾಮಾಜಿಕ ಕಲ್ಯಾಣ, ದಲಿತ ಹಾಗೂ ಬುಡಕಟ್ಟು ಜನಾಂಗ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸೇರಿಕೊಳ್ಳಲಿದೆ. ಸಮಗ್ರ ಸಾಮಾಜಿಕ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕಲ್ಪಿಸುವುದು ಈ ಖಾತೆಯ ಹೊಣೆಗಾರಿಕೆಯಾಗಿರುತ್ತದೆ.
ಸಂಪುಟ ವಿಸ್ತರಣೆ ಯಾವಾಗ?: ದಸರಾ ಸಂಭ್ರಮ ಮುಗಿದ ನಂತರ ಮನಮೋಹನ್ ಸಿಂಗ್ ಅವರ ಕ್ಯಾಬಿನೆಟ್ ಗೆ ಸರ್ಜರಿಯಾಗುವ ಲಕ್ಷಣಗಳಿದೆ.
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿಗೆ ಸೂಕ್ತ ಸ್ಥಾನ ಮಾನ ನೀಡಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಯುಪಿಎ ಸಜ್ಜಾಗಿದೆ. ರಾಹುಲ್ ಗಾಂಧಿ ಜೊತೆಗೆ ಆತನ ಯುವಪಡೆಯಲ್ಲಿರುವ ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ ಅವರನ್ನು ಕೂಡಾ ಕ್ಯಾಬಿನೇಟ್ ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ. ಆದರೆ, ಮುಹೂರ್ತ ಮಾತ್ರ ಇನ್ನೂ ಫಿಕ್ಸ್ ಆಗಿಲ್ಲ.