ಜಿ ಕೆಟಗರಿ ನಿವೇಶನ ತನಿಖೆಗೆ ಸಮಿತಿ ರಚನೆ

ನ್ಯಾ ಬಿ. ಪದ್ಮರಾಜ್, ನ್ಯಾ ರಂಗವಿಠಲಾಚಾರ್ ಹಾಗೂ ಪಿಬಿ ಮಹಿಷಿ ಅವರನ್ನೊಳಗೊಂಡ ಸಮಿತಿ ಸುಮಾರು 249 ನಿವೇಶನಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಜಿ ಕೆಟಗೆರಿ ಹಂಚಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಕೀಲ ವಾಸುದೇವ್ ಎಂಬುವವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಜಿ' ಕೋಟಾ ನಿವೇಶನ (G category sites) ಹಂಚಿಕೆ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದ ನಂತರ ಜಗದೀಶ್ ಶೆಟ್ಟರ್ ಸರ್ಕಾರ ಜಿ ಕೆಟಗೆರಿ ನಿವೇಶನ ಹಂಚಿಕೆಯನ್ನು ಸ್ಥಗಿತಗೊಳಿಸಿತು. ಮೇ 19 ರಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆದೇಶ ಹೊರಡಿಸಿದ್ದರು.
'ಬಿಡಿಎ ಬಿಡಿ ನಿವೇಶನಗಳನ್ನು 'ಜಿ' ಕೋಟಾ ಅಡಿಯಲ್ಲಿ ಹಂಚಿಕೆ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ 2010ರ ಡಿಸೆಂಬರ್ 15ರಂದು ಆದೇಶ ಹೊರಡಿಸಿತ್ತು.
ಈವರೆಗೂ ಸರ್ಕಾರ ಹೊರಡಿಸಿರುವ ಆದೇಶಗಳಲ್ಲಿ 325 ಪ್ರಕರಣಗಳಲ್ಲಿ ಇನ್ನೂ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ. ಕಾನೂನು ಇಲಾಖೆಯ ಅಭಿಪ್ರಾಯದಂತೆ ನಿವೇಶನ ಹಂಚಿಕೆ ಮಾಡದಿರುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕಳೆದ 10 ವರ್ಷಗಳಲ್ಲಿ 867 ಸೈಟುಗಳನ್ನು ವಿತರಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿದೆ.
ಮಾಜಿ ಮುಖ್ಯಮಂತ್ರಿಗಳೇ ಟಾರ್ಗೆಟ್: ಬಿಎಸ್ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಲದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳ ಬಗ್ಗೆ ನ್ಯಾಯಾಂಗ ಸಮಿತಿ ಹೆಚ್ಚಿನ ತನಿಖೆ ನಡೆಸಲಿದೆ.
ಮುಖ್ಯಮಂತ್ರಿಗಳ ವಿವೇಚನಾ(ಜಿ) ಕೋಟಾದಡಿ 316 ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿಯೊಬ್ಬರ ನೇತೃತ್ವದ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಎರಡು ವಾರಗಳೊಳಗಾಗಿ ಸಮಿತಿ ರಚಿಸಿ, ನಾಲ್ಕು ವಾರಗಳೊಳಗಾಗಿ ವರದಿ ನೀಡುವಂತೆ ನ್ಯಾಯಪೀಠ ಆದೇಶಿಸಿತ್ತು. ಈಗ ಮೇಲ್ಕಂಡ ನ್ಯಾಯ ಸಮಿತಿ ಕೂಡಾ ತನಿಖೆ ನಡೆಸಲಿದೆ.
2006 ರಿಂದ 2009ರ ಅವಧಿಯಲ್ಲಿ ಮಂಜೂರಾದ ನಿವೇಶನಗಳ ಕುರಿತಂತೆ ಸಮಿತಿ ಪರಿಶೀಲನೆ ನಡೆಸಲಿದೆ. ಕುಮಾರಸ್ವಾಮಿ ಕಾಲದಲ್ಲಿ 250 ಹಾಗೂ ಯಡಿಯೂರಪ್ಪ ಅವಧಿಯಲ್ಲಿ 66 ನಿವೇಶನಗಳು ಹಂಚಿಕೆಯಾಗಿತ್ತು.
ಅರ್ಜಿದಾರರ ಪ್ರಕಾರ ಈ ಎಲ್ಲಾ ಹಂಚಿಕೆಯೂ ಕಾನೂನು ಬಾಹಿರವಾಗಿದೆ. ಬಿಡಿಎ ನಿಯಮಗಳಿಗೆ ವಿರುದ್ಧವಾಗಿವೆ. ಅರ್ಜಿದಾರರಿಂದ ಅರ್ಜಿ ಸ್ವೀಕರಿಸದೇ ನಿವೇಶನ ಹಂಚಿಕೆ ಮಾಡಲಾಗಿದೆ. ಸಹಸ್ರಾರು ಮಂದಿ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿರುವಾಗ ಅರ್ಜಿ ಹಾಕದವರಿಗೆ ನಿವೇಶನ ಹಂಚಿರುವುದು ಸರಿಯಲ್ಲ ಎಂದು ನ್ಯಾಯಪೀಠದ ಗಮನ ಸೆಳೆದಿದ್ದಾರೆ.
ಇನ್ನೊಂದು ದಾಖಲೆ ಪ್ರಕಾರ ಕಳೆದ 14 ವರ್ಷಗಳಲ್ಲಿ ಸುಮಾರು 1,128 ನಿವೇಶನಗಳನ್ನು ಹಂಚಲಾಗಿದ್ದು, ಎಂಎಲ್ ಎ, ಸಂಸದರು(ಹಾಲಿ ಹಾಗೂ ಮಾಜಿ), ಮಾಜಿ ಸಚಿವರು, ನಟ/ನಟಿಯರು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರು, ಸಿಎಂ ಕಚೇರಿಯ ಸಿಬ್ಬಂದಿ ಸೇರಿದಂತೆ ಹಲವರಿಗೆ ಜಿ ಕೆಟಗೆರಿ ನಿವೇಶನಗಳನ್ನು ಹಂಚಲಾಗಿದೆ.
ನಿವೇಶನ ಪಡೆದ ಫಲಾನುಭವಿಗಳು ನಿವೇಶನ ಪಡೆದ ದಿನದಿಂದ 3 ವರ್ಷದೊಳಗೆ ಅಲ್ಲಿ ಮನೆ ಕಟ್ಟಲೇಬೇಕು ಎಂಬ ನಿಯಮವಿದ್ದು, ಈ ನಿವೇಶನವನ್ನು ಪರಭಾರೆ ಮಾಡುವಂತಿಲ್ಲ ಎಂದು ಬಿಡಿಎ ಕಾಯ್ದೆ 1997 ಹೇಳುತ್ತದೆ.











Click it and Unblock the Notifications