ಕರ್ನಾಟಕಕ್ಕೆ ಆಘಾತ: ಸುಪ್ರೀಂ ವಿಚಾರಣೆ ಸೋಮವಾರಕ್ಕೆ

ಹಿಂದಿನ ಸುದ್ದಿ: ಇತ್ತ ಕಾವೇರಿ ನದಿ ನೀರಿಗಾಗಿ ಕರ್ನಾಟಕದ ಮಂದಿ ತಹತಹಿಸುತ್ತಿರುವಾಗ ಮತ್ತು ಕಾವೇರಿ ನೀರು ಹಂಚಿಕೆ ಸಂಬಂಧ ವಾಸ್ತವ ಅಧ್ಯಯನಕ್ಕೆ ಕೇಂದ್ರದಿಂದ ಹಿರಿಯ ಅಧಿಕಾರಿಗಳ ತಂಡವೊಂದು ನಿನ್ನೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವ ಸಂದರ್ಭದಲ್ಲಿ, ಅತ್ತ ರಾಜಧಾನಿ ದಿಲ್ಲಿಯಲ್ಲಿ ಸುಪ್ರೀಂಕೋರ್ಟ್ ಕಾವೇರಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಈಗಾಗಲೇ 9 ಸಾವಿರ ಕ್ಯುಸೆಕ್ ನೀರನ್ನು ಬಿಡಬೇಕೆಂಬ ಸಿಎಆರ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ್ದರೂ ಇನ್ನೂ ನಿತ್ಯಾ 2 ಟಿಎಂಸಿ ನೀರು ಬಿಡಿ ಎಂದು ತಮಿಳುನಾಡು ಸರಕಾರ (ಸೆ. 29ರಂದು) ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿ ಎಂದೂ ಕರ್ನಾಟಕ ಮೊರೆಯಿಟ್ಟಿದೆ. ಇದರ ಬಗ್ಗೆಯೂ ಸು. ಕೋರ್ಟ್ ತೀರ್ಪು ತೆಗೆದುಕೊಳ್ಳಬೇಕಾಗಿದೆ.
ಈ ಮಧ್ಯೆ, ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ನಿರ್ದೇಶನವನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಸಿಆರ್ಎಗೂ ಮೇಲ್ಮನವಿ ಸಲ್ಲಿಸಿದೆ. ಸಿಆರ್ಎ ಕಾರ್ಯದರ್ಶಿ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದ್ದಾರೆ.
ತಡೆಯಾಜ್ಞೆ, ಮರುಪರಿಶೀಲನಾ ಅರ್ಜಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಮ್ ಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಇಲ್ಲವೆ ಮಾರ್ಪಾಡು ಮಾಡಬೇಕು ಎಂದು ಕೋರಿ ರಾಜ್ಯ ಸರಕಾರವು ನಿನ್ನೆಯಷ್ಟೇ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.
ಕರ್ನಾಟಕದ ವಾದ/ ಆಕ್ಷೇಪಗಳೇನು?: ಕೇಂದ್ರ ತಂಡವು ಇನ್ನು ನಾಲ್ಕು ದಿನಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ಅಲ್ಲಿಯವರೆಗೂ ಸಿಆರ್ಎ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಎಂಬುದು ಮುಖ್ಯ ವಾದ. 1996 ಹಾಗೂ 2002ರಲ್ಲಿ ಇಂತಹದೇ ಪರಿಸ್ಥಿತಿ ತಲೆದೋರಿದ್ದಾಗ ಕೇಂದ್ರ ತಂಡ ಕಳುಹಿಸಲಾಗಿತ್ತು ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.
ತಮಿಳುನಾಡಿಗೆ ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಪ್ರಧಾನಿ ನೇತೃತ್ವದಲ್ಲಿ ನಡೆದ ಕಾವೇರಿ ನದಿ ಪ್ರಾಧಿಕಾರದ ಸಭೆಯ ಸೂಚನೆ ಅವೈಜ್ಞಾನಿಕ. ನೀರು ಬಿಡುವಂತೆ ಸೂಚನೆ ನೀಡುವ ಮೊದಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಉಭಯ ರಾಜ್ಯಗಳ ವಾಸ್ತವ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ಸೂಕ್ತ ನಿರ್ದೇಶನ ನೀಡಬೇಕಿತ್ತು?
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬೆಳೆಗಳಿಗೆ ನೀರು ಸಾಕಾಗುತ್ತಿಲ್ಲ. ಬೆಂಗಳೂರು ಸೇರಿದಂತೆ ಇತರೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದಲ್ಲದೆ, ಮಳೆಯ ಅಭಾವದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ವರ್ಷ ಶೇ 48.3ರಷ್ಟು ಮಳೆ ಕಡಿಮೆ ಆಗಿದೆ. ಈ ಸಂಗತಿಯನ್ನು ತಮಿಳುನಾಡು ನಿರಾಕರಿಸಿಲ್ಲ ಅಥವಾ ಪ್ರಶ್ನೆ ಮಾಡಿಲ್ಲ. 38 ವರ್ಷದಲ್ಲಿ ಇಷ್ಟೊಂದು ಕಡಿಮೆ ಮಳೆಯಾದ ಉದಾಹರಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ, ತಮಿಳುನಾಡಿಗೆ ನೀರು ಬಿಡಬೇಕೆಂಬ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಿ, ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಸರಕಾರ ಮನವಿ ಮಾಡಿದೆ.












Click it and Unblock the Notifications