ಆಸ್ತಿ ಮುಟ್ಟುಗೋಲು; ಜಾಮೀನೂ ಇಲ್ಲ ಜಗನ್ ಗೆ ಭಾರಿ ಹಿನ್ನಡೆ

ತಾಜಾ ವರದಿಯ ಪ್ರಕಾರ ಸಂಸದ ಜಗನ್ಮೋಹನ್ ರೆಡ್ಡಿಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದೆ. ಜಗನ್ ವಿರುದ್ಧದ ಪ್ರಕರಣವು ತನಿಖೆ ಪ್ರಮುಖ ಘಟ್ಟದಲ್ಲಿರುವುದರಿಂದ ಜಾಮೀನು ನೀಡಲಾಗದು ಎಂದು ಕೋರ್ಟ್ ಹೇಳಿದೆ.
ಜಗನ್ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖಾಸಗಿ ಕಂಪನಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಲಂಚ ಪಡೆದ ಹಗರಣ ಸಂಬಂಧ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜಗನ್ ವಿರುದ್ಧ ಈ ಕ್ರಮ ಕೈಗೊಂಡಿದೆ. ಇದು ಜಗನ್ ಗೆ ಭಾರಿ ಪೆಟ್ಟು ಕೊಟ್ಟಿದ್ದು, ಪ್ರಕರಣ ಅವರ ವಿರುದ್ಧ ಮತ್ತಷ್ಟು ಬಿಗಿಯಾಗಿದೆ.
ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ಜಗನ್ ಸಂಸ್ಥೆಗಳು ಆಂಧ್ರ ಸರ್ಕಾರದಿಂದ ಅಕ್ರಮವಾಗಿ ಲಾಭ ಗಳಿಸಿವೆ ಎನ್ನಲಾಗಿದೆ. ಜಪ್ತಿ ಮಾಡಲಾದ ಈ ಆಸ್ತಿಗಳ ಉಪಯೋಗ ಮತ್ತು ಅವುಗಳಿಂದ ಯಾವುದೇ ರೀತಿಯ ಲಾಭಗಳನ್ನು ಆರೋಪಿಗಳು ಪಡೆಯುವಂತೆ ಇಲ್ಲ ಎಂದು ಜಾರಿ ನಿರ್ದೇಶನಾಲಯ ಆದೇಶ ತಿಳಿಸಿದೆ.
ಜನನಿ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ 13 ಎಕರೆ ಜಮೀನು ಹಾಗೂ ಜಗತಿ ಪಬ್ಲಿಕೇಶನ್ ಲಿಮಿಟೆಡ್ಗೆ ಸೇರಿದ 14.50 ಕೊಟಿ ರೂಪಾಯಿ ಸ್ಥಿರ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಎರಡು ಸಂಸ್ಥೆಗಳು ಜಗನ್ ಒಡೆತನಕ್ಕೆ ಸೇರಿವೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಕಠಿಣ ನಿಬಂಧನೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಟ್ರೊ ಡ್ರಗ್ಸ್ ಲಿಮಿಟೆಡ್ ಕಂಪನಿಯ 35 ಎಕರೆ ಜಮೀನು ಮತ್ತು 3 ಕೊಟಿ ರೂಪಾಯಿ ಸ್ಥಿರ ಠೇವಣಿ, ಎಪಿಎಲ್ ರಿಸರ್ಚ್ ಸೆಂಟರ್ ಲಿಮಿಟೆಡ್ನ 96 ಎಕರೆ ಜಮೀನು, ಅರಬಿಂದೊ ಫಾರ್ಮಾದ ಮೂರು ಕೋಟಿ ರೂಪಾಯಿ ಸ್ಥಿರ ಠೇವಣಿ ಜಪ್ತಿಗೂ ಆದೇಶ ಹೊರಡಿಸಲಾಗಿದೆ.
ಜಗನ್ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.












Click it and Unblock the Notifications