ಲೋಡ್ ಶೆಡ್ಡಿಂಗ್ ಅನಿವಾರ್ಯ: ಶೋಭಾ ಕರಂದ್ಲಾಜೆ

ವಿದ್ಯುತ್ ಉತ್ಪಾದನೆಗೆ ಸಾಕಷ್ಟು ನೀರಿನ ಪ್ರಮಾಣವಿಲ್ಲ. ಉಷ್ಣವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಿದೆ. ಕೇಂದ್ರದಿಂದ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾಗದ ಪರಿಣಾಮ ಉಷ್ಣ ವಿದ್ಯುತ್ ಉತ್ಪಾದನೆಗೆ ತೊಡಕಾಗಿದೆ.
ಈಗ ಕೆಪಿಟಿಸಿಲ್ ಪ್ರತಿದಿನ 37 ದಶಲಕ್ಷ ಯೂನಿಟ್ ಉತ್ಪಾದನೆ ಮಾಡುತ್ತಿದ್ದು, ಪ್ರತಿ ತಿಂಗಳು ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಪ್ರತಿ ದಿನ 10 ರಿಂದ 15 ದಶಲಕ್ಷ ಯೂನಿಟ್ ಕೊರತೆ ಅನುಭವಿಸಲಾಗುತ್ತಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು ಎಂದು ಸಚಿವೆ ಶೋಭಾ ಹೇಳಿದರು.
ಪ್ರತಿ ದಿನದ ಕೊರತೆ ತುಂಬಲು ರಾಜ್ಯದಾದ್ಯಂತ ಲೋಡ್ ಶೆಡ್ಡಿಂಗ್ ಪ್ರಯೋಗಿಸಲಾಗುತ್ತದೆ. ಈ ಅಸ್ತ್ರಕ್ಕೆ ಮೊದಲ ಬಲಿಯಾಗುವುದು ರೈತಾಪಿ ವರ್ಗ. ಬಿಸಿಲು ಹೆಚ್ಚಾಗಿ ಮನೆಯಲ್ಲಿ ಫ್ಯಾನ್ ತಿರುಗದಿದ್ದಾಗ ಅರೆ ನಗರವಾಸಿಗಳು, ನಗರವಾಸಿಗಳಿಗೆ ಲೋಡ್ ಶೆಡ್ಡಿಂಗ್ ಬಿಸಿ ತಟ್ಟುತ್ತದೆ.
ಬೆಂಗಳೂರಿನಲ್ಲಿ ಬಹುತೇಕ ಲೋಡ್ ಶೆಡ್ಡಿಂಗ್ ಕಡಿಮೆ ಮಾಡುವ ಸೂಚನೆ ಇಂಧನ ಇಲಾಖೆಯಿಂದ ಸಿಕ್ಕಿದೆ. ಉಳಿದಂತೆ ಹಳ್ಳಿಗಳಲ್ಲಿ 10 ಗಂಟೆ ಕರೆಂಟ್ ಪೂರೈಕೆಯಾಗುತ್ತಿದೆ. ಉಳಿದ 14 ಗಂಟೆಗಳಲ್ಲಿ ಆರು ಗಂಟೆ 3 ಫೇಸ್ ಹಾಗೂ 4 ಗಂಟೆ 2 ಫೇಸ್ ವಿದ್ಯುತ್ ನೀಡಿ ಕಣ್ಣಾಮುಚ್ಚಾಲೆ ಆಟವಾಡಲಾಗುತ್ತಿದೆ.
ಉತ್ಪಾದನೆ ಹೇಗಿದೆ?: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಬೃಹತ್, ಸಣ್ಣ ಜಲವಿದ್ಯುತ್ ಹಾಗೂ ಅಣು ವಿದ್ಯುತ್ ಸೇರಿದಂತೆ ಐದು ರೀತಿಯಲ್ಲಿ ಸುಮಾರು 175ಕ್ಕೂ ಅಧಿಕ ಮಿಲಿಯನ್ ಯೂನಿಟ್ ಉತ್ಪಾದಿಸಲಾಗುತ್ತದೆ.
* 1819 ಅಡಿ ಇರುವ ಲಿಂಗನಮಕ್ಕಿ ಜಲಾಶಯದಿಂದ 2690 ದಶಲಕ್ಷ ಯೂನಿಟ್.
* ಸೂಪಾ ಜಲಾಶಯದಿಂದ 1435 ದಶಲಕ್ಷ ಯೂನಿಟ್.
* ಮಾಣಿ ಜಲಾಶಯದಿಂದ 412 ದಶಲಕ್ಷ ಯೂನಿಟ್.
ಎಲ್ಲಾ ಜಲಾಶಯಗಳು ತುಂಬಿ ತುಳುಕಿದರೆ ನಿಮ್ಮ ಮನೆಯಲ್ಲಿ ಬಲ್ಬ್ ಉರಿಯಲು ಸಾಧ್ಯ. ಆದರೆ, ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣ. ಅಗತ್ಯಕ್ಕಿಂತ ಹೆಚ್ಚುತ್ತಿರುವ ಬೇಡಿಕೆ.
ವಿವಿಧ ಮೂಲಗಳಿಂದ ವಿದ್ಯುತ್ 850 ದಶಲಕ್ಷ ಯೂನಿಟ್ ನಿಂದ 500 ದಶಲಕ್ಷ ಯೂನಿಟ್ ಸಂಗ್ರಹಿಸಲಾಗುತ್ತಿದೆ. ಜಿಂದಾಲ್ ಸಂಸ್ಥೆ. ರಿಲಯನ್ಸ್ ಹಾಗೂ ಛತ್ತೀಸ್ ಗಡ ಕಂಪನಿಗಳ ವಿದ್ಯುತ್ ಕೂಡಾ ಪಡೆಯಲಾಗುತ್ತಿದೆ. ಉಡುಪಿ, ಬಳ್ಳಾರಿ ಘಟಕ ಆರಂಭಕ್ಕೆ ಕಾಯಬೇಕಿದೆ.
ಹಂಚಿಕೆ: ಹೀಗೆ ಜಲಾಶಯ ಹಾಗೂ ಪರರಾಜ್ಯದಿಂದ ಬಂದ ವಿದ್ಯುತ್ ಆನ್ನು ಐದು ವಿದ್ಯುತ್ ಪ್ರಸರಣ ಸಂಸ್ಥೆ ಮೂಲಕ ವಿವಿಧೆಡೆ ಹಂಚಲಾಗುತ್ತದೆ. ಬೆಸ್ಕಾಂ(ಬೆಂಗಳೂರು) ಹೆಸ್ಕಾಂ(ಹುಬ್ಬಳ್ಳಿ), ಜೆಸ್ಕಾಂ(ಗುಲ್ಬರ್ಗಾ), ಮೆಸ್ಕಾಂ(ಮಂಗಳೂರು), ಚೆಸ್ಕಾಂ(ಮೈಸೂರು)
ಬೆಂಗಳೂರಿನಲ್ಲಿ ಸುಮಾರು 4.5 ಲಕ್ಷ ವಾಣಿಜ್ಯ ಉದ್ದೇಶಿತ ವಿದ್ಯುತ್ ಬಳಕೆ ದಾರರಿದ್ದಾರೆ. ಮಾಲ್, ಕಾಂಪ್ಲೆಕ್ಸ್ ಗಳಲ್ಲಿ ಬಳಕೆ ಮಾಡುವ ವಿದ್ಯುತ್ ಬಗ್ಗೆ ನಿಗಾವಹಿಸಲು ಬೆಸ್ಕಾಂ ನಿರ್ಧರಿಸಿದೆ.












Click it and Unblock the Notifications