ನಕ್ಸಲೀಯರು ಶರಣಾಗಲು ಸರಕಾರದ ಡೆಡ್ಲೈನ್

ಶನಿವಾರ, ಸೆ.15ರಂದು ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ ಶೆಟ್ಟರ್ ಅವರು, ಸೆಪ್ಟೆಂಬರ್ 17ರಿಂದ 23ರವರೆಗೆ ನಕ್ಸಲೀಯ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು ಮತ್ತು ಸರಕಾರದ ಶರಣಾಗತಿ ನೀತಿಯಡಿ, ಸಮಾಜದಲ್ಲಿ ನೆಮ್ಮದಿಯಿಂದ ಬಾಳಲು ಹಿಂಸಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿರುವ ನಕ್ಸಲೀಯರಿಗೆ ಶರಣಾಗಲು ಒಂದು ವಾರಗಳ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕುಕ್ಕೆ ಸುಬ್ರಮಣ್ಯ, ಕೈಕಂಬ ಮತ್ತು ಚೆರು ಅರಣ್ಯ ಪ್ರದೇಶಗಳಲ್ಲಿ ನಕ್ಸಲೀಯರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಸೆ.4ರಂದು ನಕ್ಸಲೀಯರು ಮತ್ತು ನಕ್ಸಲೀಯ ನಿಗ್ರಹ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಹತ್ಯೆಯಾಗಿ ಹಲವಾರು ಜನರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬ ನಕ್ಸಲೀಯನ ದೇಹ ಸೆ.13ರಂದು ಚೆರು ಪ್ರದೇಶದಲ್ಲಿ ಸಿಕ್ಕಿದೆ. ಉಳಿದವರಿಗಾಗಿ ಹುಡುಕಾಟ ನಡೆದಿತ್ತು.
ತ.ನಾಡಿಗೆ ನೀರು ಬಿಡದಿರಲು ನಿರ್ಧಾರ : ಮಡಿಕೇರಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿರುವ ಕಾರಣ ಮತ್ತು ಕೃಷ್ಣರಾಜಸಾಗರ ಅಣೆಕಟ್ಟೆ ಸಂಪೂರ್ಣವಾಗಿ ತುಂಬುವ ಸಾಧ್ಯತೆ ಕ್ಷೀಣಿಸಿರುವ ಕಾರಣ, ಒಪ್ಪಂದದಂತೆ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಬಿಡದಿರಲು ಸರ್ವಪಕ್ಷಗಳ ಸಭೆ ನಿರ್ಧರಿಸಿದೆ.
ಸೆ.19ರಂದು ನವದೆಹಲಿಯಲ್ಲಿ, ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯ ಕಾವೇರಿ ನೀರು ಪ್ರಾಧಿಕಾರದ ಜೊತೆ ನಡೆಯಲಿರುವ ಸಭೆಯಲ್ಲಿ, ನಿರೀಕ್ಷಿಸಿದಷ್ಟು ನೀರನ್ನು ಕೆಆರ್ಎಸ್ನಿಂದ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲು ರಾಜ್ಯ ಸರಕಾರ ಒತ್ತಾಯಿಸಿದೆ.
ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ರಾಜ್ಯ ಈಗಾಗಲೆ ಬರಗಾಲದಿಂದ ತತ್ತರಿಸಿದೆ, ಈಗ ಬಿಟ್ಟಂತೆ ಅಗಾಧ ಪ್ರಮಾಣದಲ್ಲಿ ನೀರು ಬಿಟ್ಟರೆ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 45 ದಿನಗಳಲ್ಲಿಯೇ ನೀರು ಖಾಲಿಯಾಗಲಿದೆ. ಆದ್ದರಿಂದ ತಮಿಳುನಾಡಿಗೆ ನೀರು ಬಿಡದಿರಲು ಪಕ್ಷಭೇದ ಮರೆತು ರಾಜ್ಯ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸರಕಾರಕ್ಕೆ ಮನವಿ ಮಾಡಿದರು.
ಇದಕ್ಕೆ ಸಮ್ಮತಿಸಿದ ಜಗದೀಶ್ ಶೆಟ್ಟರ್ ಅವರು, ಇಡೀ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಆಗಬೇಕಿದೆ. ಈಗಾಗಲೆ ರಾಜ್ಯದಲ್ಲಿ ಅನೇಕ ತಾಲೂಕುಗಳು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿಯಾಗಿದೆ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಈ ಕುರಿತಂತೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಯತ್ನಿಸುವುದಾಗಿ ತಿಳಿಸಿದರು.












Click it and Unblock the Notifications