ಮೆಜೆಸ್ಟಿಕ್ ನಲ್ಲಿ ಕಾಣಿಸಿಕೊಂಡ ಯಡಿಯೂರಪ್ಪ
ಮೊದಲಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪ್ರವೇಶಿಸಿದ ಯಡಿಯೂರಪ್ಪ ಅವರನ್ನು ಕಂಡೊಡನೆ ಅಲ್ಲಲ್ಲಿ ಇದ್ದ ಜನರೆಲ್ಲ ಅವರ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ನಂತರ ಅಲ್ಲಿಂದ ಬಿಎಂಟಿಸಿ ನಿಲ್ದಾಣಕ್ಕೆ ತೆರಳಿದ ಯಡಿಯೂರಪ್ಪ ಅವರು ಅಲ್ಲಿದ್ದ ಕೆಲ ಅಧಿಕಾರಿಗಳೊಡನೆ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಸಾರಿಗೆ ಸಚಿವ ಆರ್ ಅಶೋಕ್ ಅವರೊಂದಿಗೆ ನಾನು ಚರ್ಚಿಸುತ್ತೇನೆ. ನಿಮ್ಮ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲು ಬಿಜೆಪಿ ಸದಾ ಸಿದ್ಧವಾಗಿದೆ. ಸಾರಿಗೆ ಸಂಸ್ಥೆ ನೌಕರರ ಹಿತ ಕೂಡಾ ನಮಗೆ ಮುಖ್ಯ. ಸಂಜೆಯೊಳಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.
ವೇತನ ಹೆಚ್ಚಳ ಸೇರಿದಂತೆ ಸುಮಾರು 42 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವ ನೌಕರರ ಸಂಘಟನೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾರಿಗೆ ಸಂಸ್ಥೆಯ ಕಾರ್ಮಿಕ ಮುಖಂಡರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿರುವ ಬಿಎಸ್ ಯಡಿಯೂರಪ್ಪ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಸಾರ್ವಜನಿಕರು ಹಾಗೂ ನೌಕರರ ವರ್ಗದ ಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ವಿಷಯವಾಗಿ ನನ್ನ ಕೈಲಾದ ಮಟ್ಟಿನ ನೆರವು ನಾನು ನೀಡುತ್ತೇನೆ. ಆದಷ್ಟು ಬೇಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಮುಷ್ಕರ ನಿರತ ನೌಕರರ ಮೇಲೆ ಕಠಿಣ ಕ್ರಮ ಜರುಗಿಸುವುದು ಹಾಗು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ 1968 ಎಸ್ಮಾ ಜಾರಿಗೊಳಿಸುವಂತೆ ಸಾರಿಗೆ ಸಚಿವ ಆರ್ ಅಶೋಕ್ ಮೇಲೆ ಸಚಿವ ಸಂಪುಟದ ಸಹದ್ಯೋಗಿಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಅದರೆ, ಈ ಬಗ್ಗೆ ಇನ್ನೂ ಸಚಿವ ಸಂಪುಟ ನಿರ್ಧಾರ ಕೈಗೊಂಡಿಲ್ಲ.
ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ (ಸೆ.14) ಬೆಳಗ್ಗಿನಿಂದಲೇ ಸಿಲಿಕಾನ್ ಸಿಟಿ ಅಗತ್ಯ ಸೇವೆ ಇಲ್ಲದೆ ತತ್ತರಿಸಿದೆ. ವಾರಕ್ಕೊಮ್ಮೆ ರಸ್ತೆಗಿಳಿಯುತ್ತಿದ್ದ ಖಾಸಗಿ ವಾಹನಗಳು ಶುಕ್ರವಾರ ಏಕಾಏಕಿ ರಸ್ತೆಯಲ್ಲಿ ಧೂಳೆಬ್ಬಿಸಿದ ಪರಿಣಾಮ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನ ರಿಚ್ಮಂಡ್ ರಸ್ತೆ, ಕೋರಮಂಗಲ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಆಡುಗೋಡಿ, ಹೆಬ್ಬಾಳ, ಇಂದಿರಾನಗರ, ಸದಾಶಿವ ನಗರ, ಮೇಕ್ರಿ ರಸ್ತೆ, ಕಾರ್ಪೋರೇಷನ್, ಓಕಳಿಪುರಂ, ನವರಂಗ್ ವೃತ್ತ, ಮಾಗಡಿ ರಸ್ತೆ, ಬಿಟಿಎಂ ಲೇಔಟ್, ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಿಢೀರ್ ಸಂಚಾರ ದಟ್ಟಣೆಯಿಂದ ಸಂಚಾರಿ ಪೊಲೀಸರು ಕೂಡಾ ಕೆಲ ಕಾಲ ಕಂಗಾಲಾಗಿದ್ದು ಹಲವೆಡೆ ಕಂಡು ಬಂದಿದೆ.













Click it and Unblock the Notifications