ನನಗೆ ವಯಸ್ಸಾಯ್ತು ಅಧ್ಯಕ್ಷ ಪಟ್ಟಕ್ಕೇರಲಾರೆ
ಕೈಗಾರಿಕ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ ನಂತರ ಸಿಎಂ ಉದಾಸಿ ಅವರು ಅದೇ ರಾಗ ಹಾಡಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೆಲವೆಡೆಯಿಂದ ಉಲ್ಲೇಖವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರು, ತಮಗೆ ಈಗಿರುವ ಜವಾಬ್ದಾರಿಯೇ ಸಾಕು. ತಾವು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನನಗೆ ವಯಸ್ಸಾಗಿದೆ. ಓಡಾಟ ಮಾಡಲು ಕಷ್ಟ ಸಾಧ್ಯ.ರಾಜ್ಯಾಧ್ಯಕ್ಷರ ಹುದ್ದೆ ಬಗ್ಗೆ ಸಂಘಟನೆ, ಪರಿವಾರ, ಅಖಿಲ ಭಾರತೀಯ ಪದಾಧಿಕಾರಿಗಳು ನಿರ್ಧರಿಸಲಿ. ಆದರೆ,, ಪಕ್ಷದ ಸಂಘಟನೆ, ಬಲವೃದ್ಧಿ ದೃಷ್ಟಿಯಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಹಿರಿಯರು ಯೋಚಿಸಲಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ ಚುನಾವಣೆ ಬಗ್ಗೆ ಪಕ್ಷ ಯೋಚಿಸಬೇಕಿದೆ. ಪಕ್ಷದ ಕಾರ್ಯಕರ್ತರಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುವ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದರೆ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷ ಕೈಗೊಂಡಿರುವ ಪ್ರತ್ಯೇಕ ಬರ ಪ್ರವಾಸ ಅಧ್ಯಯನವನ್ನು ಸಿಎಂ ಉದಾಸಿ ಅವರು ಸಮರ್ಥಿಸಿಕೊಂಡರು.
ರಾಜ್ಯಾಧ್ಯಕ್ಷ ಹುದ್ದೆ ಗಿಟ್ಟಿಸಲು ನಾನು ದೆಹಲಿಗೆ ಹೋಗಿ ಲಾಬಿ ನಡೆಸಿದೆ ಎಂಬುದು ಸುಳ್ಳು. ನನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಡ. ನನಗೆ ಅಧ್ಯಕ್ಷ ಪಟ್ಟ ಕೊಡಿಸಲು ಯಾರೊಬ್ಬರು ನನ್ನ ಪರ ವಕಾಲತ್ತು ವಹಿಸುವುದು ಬೇಡ' ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ನಂತರ ಮುರುಗೇಶ್ ನಿರಾಣಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಳಿದಂತೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ, ಸದಾನಂದ ಗೌಡರ ನಂತರ ಸಚಿವ ಸಿಟಿ ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ ಜೋಶಿ, ಶಾಸಕ ರಘುನಾಥರಾವ್ ಮಲ್ಹಾಪುರೆ ಹೆಸರು ಕೇಳಿಬಂದಿದೆ.