ಕಾವೇರಿ: ಸುಪ್ರೀಂ ಆದೇಶ ಪಾಲಿಸಲೇ ಬೇಕು
ಸೆಪ್ಟಂಬರ್ 19ರಂದು ದೆಹಲಿಯಲ್ಲಿ ನಡೆಯಲಿರುವ ಕಾವೇರಿ ಪ್ರಾಧಿಕಾರದ ಸಭೆಯ ಮುನ್ನ ಸೆಪ್ಟಂಬರ್ 15ರಂದು ಮತ್ತೊಂದು ಸರ್ವಪಕ್ಷಗಳ ಸಭೆಯನ್ನು ಕರೆದು ಇತರ ರಾಜಕೀಯ ಪಕ್ಷಗಳ ಅಭಿಪ್ರಾಯ ತಿಳಿದುಕೊಳ್ಳಲಾಗುವುದು. ಈ ಸಭೆಯಲ್ಲಿ ರಾಜ್ಯದ ಎಲ್ಲಾ ಸಂಸದರು ಭಾಗವಹಿಸಲಿದ್ದಾರೆ ಎಂದು ಶೆಟ್ಟರ್ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.
ರೈತರು ಚಿಂತಿಸುವ ಅಗತ್ಯವಿಲ್ಲ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟ ಪಡಿಸಲಿದ್ದೇವೆ. ರಾಜ್ಯದ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸೆಪ್ಟಂಬರ್ 20ರ ವರೆಗೆ ತಮಿಳುನಾಡಿಗೆ ಪ್ರತಿದಿನ ಹತ್ತು ಸಾವಿರ ಕ್ಯೂಸೆಕ್ಸ್ ನೀಡಲು ಒಪ್ಪಿ ಕೊಂಡಿದ್ದೇವೆ. ನಮ್ಮ ಭಾಗದಲ್ಲಿ ಹೆಚ್ಚುವರಿ ನೀರು ಇಲ್ಲದಿದ್ದರೂ ಅಂತರ್ ರಾಜ್ಯದಲ್ಲಿ ಉತ್ತಮ ಸಂಬಂಧ ಕಾಪಾಡಿಕೊಂಡು ಹೋಗಲು ಸುಪ್ರೀಂ ಕೋರ್ಟ್ ಮುಂದೆ ಒಪ್ಪಿ ಕೊಂಡಿದ್ದೇವೆ ಎಂದು ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸಿದ್ದು ಗರಂ: ಕಾವೇರಿ ಭಾಗದಲ್ಲಿನ ಪರಿಸ್ಥಿತಿಯನ್ನು ಪ್ರಾಧಿಕಾರಕ್ಕೆ ಮತ್ತು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ನಾನು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಪ್ರಧಾನಿ ಸಭೆಯ ಮುನ್ನ ಸರ್ವ ಪಕ್ಷಗಳ ಸಭೆಯನ್ನು ಕರೆದುಕೊಂಡು ಹೋಗಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೆಟ್ಟೂರು ಜಲಾಶಯದಲ್ಲಿ 30 ಟಿಎಂಸಿ ನೀರಿದ್ದರೂ ತಮಿಳುನಾಡಿನ ಬೇಡಿಕೆ ನ್ಯಾಯ ಸಮ್ಮತವಲ್ಲ. ತಮಿಳುನಾಡಿಗೆ ಯಾವುದೇ ನೀರು ಬಿಡುವ ಅವಶ್ಯಕತೆ ಇಲ್ಲ ಎಂದು ಸಿದ್ದು ಹೇಳಿಕೆ ನೀಡಿದ್ದಾರೆ.