ಬಹುಚರಜೀ ಶಕ್ತಿಪೀಠದಿಂದ ಮೋದಿ ಚುನಾವಣೆ ಪ್ರವಾಸ
ಅಹಮದಾಬಾದ್, ಸೆ.8: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಒಂದು ತಿಂಗಳ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 11 ರಿಂದ ರಾಜ್ಯದ ಪ್ರಮುಖ ಭಾಗಗಳಲ್ಲಿ ಮುಖ್ಯಮಂತ್ರಿ ಮೋದಿ ಸಂಚರಿಸಲಿದ್ದಾರೆ.
ಈ ಯಾತ್ರೆಗೆ ಮುಖ್ಯಮಂತ್ರಿ ಮೋದಿ ಅವರು 'ಯುವ ವಿಕಾಸ ಯಾತ್ರೆ' ಎಂದು ಹೆಸರಿಟ್ಟಿದ್ದಾರೆ. ಕುತೂಹಲದ ಸಂಗತಿಯೆಂದರೆ, ಸ್ವಾಮಿ ವಿವೇಕಾನಂದರು 150 ವರ್ಷಗಳ ಹಿಂದೆ ಶಿಕಾಗೊದಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಚಾರಿತ್ರಿಕ ಭಾಷಣ ಮಾಡಿದ ನೆನಪಿನಲ್ಲಿ ಸೆ. 11ರಂದು ಮುಖ್ಯಮಂತ್ರಿ ಮೋದಿ ಈ ಪ್ರವಾಸದಲ್ಲಿ ಮೊದಲ ಹೆಜ್ಜೆಹಾಕಲಿದ್ದಾರೆ.

ಬಹುಚರಜೀ ದೇವಸ್ಥಾನದ ಸಮೀಪ ಮಾರುತಿ ಕಾರು ಉತ್ಪಾದನೆ ಘಟಕ ಸ್ಥಾಪಿಸಲಿದೆ. ಹಾಗಾಗಿ, ಇಲ್ಲಿಂದಲೇ ಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಇದು ರಾಜ್ಯವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವುದರ ದ್ಯೋತಕವಾಗಲಿದೆ ಎಂದು ಅವರು ಹೇಳಿದ್ದಾರೆ.
ವರ್ಷಾಂತ್ಯಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಮೋದಿ ಅವರು ಚುನಾವಣೆ ನಿಮಿತ್ತ ಕೈಗೊಳ್ಳುತ್ತಿರುವ ದೊಡ್ಡಮಟ್ಟದ ಪ್ರವಾಸ ಇದಾಗಿದೆ. ಕಾಂಗ್ರೆಸ್ ಸಹ ನಾಲ್ಕು ಪ್ರಮುಖ ಯಾತ್ರೆಗಳನ್ನು ಸಂಘಟಿಸಿದೆ.
ಬಹುಚರಜೀ (ಅಂಬಾ ಭವಾನಿ) ದೇವಸ್ಥಾನ: ಗುಜರಾತಿನ ಉತ್ತರ ಭಾಗದಲ್ಲಿ ಮೆಹಸಾನಾ ಜಿಲ್ಲೆಯಲ್ಲಿ ಬಹುಚರಜೀ ಪಟ್ಟಣವಿದೆ. ದೇವಸ್ಥಾನವು ಊರಿನ ಮಧ್ಯ ಭಾಗದಲ್ಲಿದ್ದು ಅಹಮದಾದಿನಿಂದ 110 ಕಿಮೀ ದೂರದಲ್ಲಿದೆ.
ದೇವಸ್ಥಾನವು ಬಹುಚರಜೀ ದೇವಿಯ ಮೂಲಸ್ಥಾನವಾಗಿದೆ. ಇದು ಅಂಬಾ ಭವಾನಿಯ ಶಕ್ತಿಪೀಠವಾಗಿದ್ದು, ಬರೋಡಾದ ಮಹಾರಾಜರಿಂದ 1781ರಲ್ಲಿ ಸ್ಥಾಪಿತವಾಗಿದೆ. ಪ್ರತಿ ಹುಣ್ಣಿಮೆಯಲ್ಲಿ ಇಲ್ಲಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ.












Click it and Unblock the Notifications