ದೇವೇಗೌಡರ ಜೀವಮಾನದ ಆಸೆಯೇನು ಗೊತ್ತಾ?
ಏನಪಾ ಅಂದರೆ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಾವು ಕಾಣಬೇಕು ಎಂದು ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ ದೇವೇಗೌಡರು ಈ ಮಾತನ್ನು ಹೇಳಿರುವುದು ಇದೇ ಮೊದಲಲ್ಲ.
ಈ ಹಿಂದೆಯೆಲ್ಲ ತಮ್ಮ ಪುತ್ರ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಅಸಲವತ್ತುಕೊಳ್ಳುತ್ತಿದ್ದರು. ಆದರೆ ಈ ಬಾರಿ ಕುಮಾರಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿಸದೆ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದಿದ್ದಾರೆ. ಆದರೆ ಅದಕ್ಕೆ ಗೌಡರು ನೀಡಿರುವ ಕಾರಣ interesting ಆಗಿದೆ. ಅವರ ಮಾತುಗಳಲ್ಲೇ ಕೇಳಿ:
ನಾವು ದೊಡ್ಡ ದೊಡ್ಡ ಸಮಾವೇಶಗಳನ್ನು ಮಾಡುತ್ತಿರುವುದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಅಲ್ಲ. ಇಲ್ಲವೇ ನಾನು ಮತ್ತೊಮ್ಮೆ ಪ್ರಧಾನಿಯಾಗಲು ಅಲ್ಲ. ಉಳ್ಳವರ ಕೈಗೆ ಅಧಿಕಾರ ನೀಡಬೇಕು ಎಂಬುದು ನಮ್ಮ ಧರ್ಮ ಅಲ್ಲ. ಧ್ವನಿಯೇ ಇಲ್ಲದವರು ಎಲ್ಲ ಅವಕಾಶಗಳನ್ನು ಪಡೆದು ಮೇಲೆ ಬರುವಂತಾಗಬೇಕು ಎಂಬ ಉದ್ದೇಶ. ನಾವು ಹೋದ ಮೇಲೂ ಪಕ್ಷ ಉಳಿಯಬೇಕು ಎಂಬುದು ನನ್ನ ಆಶಯ.
ಜೆಡಿಎಸ್ ಪಕ್ಷ ದೇವೇಗೌಡ ಕುಟುಂಬದ ಆಸ್ತಿಯಲ್ಲ. ಈ ದೇಶದ ದಲಿತರು, ಬಡವರು, ಶೋಷಿತರ ಆಸ್ತಿ. ಅಲೆಮಾರಿಗಳು, ಶೋಷಿತ ವರ್ಗಗಳನ್ನು ಗುರುತಿಸುವ ಕೆಲಸ ನಡೆದಿದೆ ಎಂದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ. ಇದನ್ನು ನಮ್ಮನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಬೇಕು.
ರಾಜ್ಯದಲ್ಲಿ ಶೋಷಿತ ವರ್ಗಕ್ಕೆ ಅಗತ್ಯ ಸೌಲಭ್ಯ ಹಾಗೂ ಅಧಿಕಾರ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಜೆಡಿಎಸ್ನ ಎಲ್ಲ ಮುಖಂಡರು ಒಂದು ತಾಯಿ ಮಕ್ಕಳಂತೆ ಒಗ್ಗೂಡಿ ಕೆಲಸ ಮಾಡಬೇಕು. ಆ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು.
ಮಾತುಕೊಟ್ಟು ವಚನ ಭ್ರಷ್ಟರು ಅನ್ನಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ವಾಸಿ. ಇದನ್ನು ಪ್ರತಿಯೊಬ್ಬ ನಾಯಕರು ಅರ್ಥಮಾಡಿ ಕೊಳ್ಳಬೇಕು. ಜೆಡಿಎಸ್ ಚುನಾವಣೆ ಸಂದರ್ಭ ದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ.
ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ನಿರ್ಣಯದಂತೆ ಎಲ್ಲ ತಳ ಸಮುದಾಯಗಳಿಗೆ ಅಧಿಕಾರ ದೊರೆಯಬೇಕು ಎನ್ನುವಂತಹದು ಪಕ್ಷದ ನಿರ್ಣಯ ವಾಗಿದೆ. ಅದರಂತೆ ಎಲ್ಲರಿಗೂ ಕೂಡ ಅಧಿಕಾರ ಸಿಗುವವರೆಗೂ ಈ ದೇವೇಗೌಡ ಸಾಯುವುದಿಲ್ಲ.
ರಾಜ್ಯದಲ್ಲಿ ಯಾರು ಎಷ್ಟೇ ಪ್ರಯತ್ನಪಟ್ಟರೂ ಜೆಡಿಎಸ್ ಪಕ್ಷವನ್ನು ನಾಶ ಮಾಡಲು ಸಾಧ್ಯವಿಲ್ಲ. ಹಿಂದಿನಿಂದಲೂ ನಮ್ಮ ಪಕ್ಷ ಬಡವರ, ಶೋಷಿತರ, ದಲಿತರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಈಗಲೂ ಇದಕ್ಕೆ ಬದ್ಧವಾಗಿದೆ. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇವಲ ಒಂದು ಬಾರಿ ಮಾತ್ರ ಬ್ಯಾಕ್ಲಾಗ್ ಹುದ್ದೆಯನ್ನು ತುಂಬಲು ಮಾತ್ರ ಸಹಿ ಮಾಡಿದ್ದರು.
ಆದರೆ ತಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಇಲಾಖೆಗಳಲ್ಲಿ ಶೇ. 18ರಷ್ಟು ಹುದ್ದೆಗಳು ತುಂಬಬೇಕು ಎಂದು ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಬೆಳೆಸಿರುವುದಕ್ಕೆ ಕೃತಜ್ಞತೆ ಹೊಂದಿದ್ದೇನೆ.