ಅಲ್ಲಿ ತೋಳ; ಇಲ್ಲಿ ಗ್ರಿಲ್ ಮಕ್ಕಳ ಪ್ರಾಣ ನೀಗಿತು

ಬೇಲೂರಿನಲ್ಲಿ ನಿದ್ದೆ ಮಾಡುತ್ತಿದ್ದ 18 ತಿಂಗಳ ಮಗುವೊಂದನ್ನು ಗುರುವಾರ ತೋಳಗಳ ಹಿಂಡು ಬಂದು ಎತ್ತಿಕೊಂಡು ಹೋಗಿದೆ. ಅವು ಮಗುವಿನ ತಲೆಯೊದನ್ನು ಬಿಟ್ಟು ಉಳಿದ ಭಾಗವನ್ನು ತಿಂದು ತೇಗಿವೆ.
ಬೇಲೂರು ಬಳಿ ಹೊಲದಲ್ಲಿ ತಾಯಿ ಸಿದ್ದಮ್ಮ ಮಗುವಿಗೆ ಹಾಲುಣಿಸಿ, ಒಂದಷ್ಟು ಜೋಗುಳ ಹಾಡಿ ಮರದ ಕೆಳಗೆ ಮಲಗಿಸಿ, ದೈನಂದಿನ ಹೊಲದ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಮಧ್ಯಾಹ್ನದ ವೇಳೆ ಅದ್ಯಾವುದೋ ಮಾಯದಲ್ಲಿ ತೋಳಗಳ ಹಿಂಡು ಮಲಗಿದ್ದ ರುಕ್ಮಣ್ಣನನ್ನು ಎಳೆದುಕೊಂಡು ಹೋಗಿದೆ.
ಕೆಲಸದಿಂದ ವಾಪಸಾಗಿ ಮರದ ಕೆಳಗೆ ನೋಡಿದರೆ ತಾಯಿ ಹೃದಯಕ್ಕೆ ಆಘಾತವಾಗಿತ್ತು. ಏಕೆಂದರೆ ಅಲ್ಲಿ ಮಗು ಇರಲಿಲ್ಲ. ತಕ್ಷಣ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಲಾಗಿ, ಇಡೀ ಗ್ರಾಮಸ್ಥರು ಸುತ್ತಮುತ್ತಲ ಪ್ರದೇಶಗಳಲೆಲ್ಲ ತಡಕಾಡಿದ್ದಾರೆ. ಆದರೆ ಮಗುವಿನ ಸುಳಿವು ಸಿಗಲೇ ಇಲ್ಲ.
ಆದರೆ ನಿನ್ನೆ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರೊಬ್ಬರ ಕೈಯಲ್ಲಿ ಚೆಂಬು ಹಿಡಿದುಕೊಂಡು ಊರ ಹೊರಗೆ ಹೋದಾಗ ... ಅನತಿ ದೂರದಲ್ಲಿ ತೋಳಗಳ ಹಿಂಡು ಅವರನ್ನೇ ದುರುಗುಟ್ಟಿಕೊಂಡು ನೋಡಿವೆ. ಅಪಾಯದ ಸುಳಿವರಿತ ಗ್ರಾಮಸ್ಥ ತಕ್ಷಣ ಹಳ್ಳಿಯತ್ತ ಪೇರಿ ಕಿತ್ತಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದ ಆದ ಹಿಂದಿನ ದಿನ ಗ್ರಾಮದಲ್ಲಿ ನಡೆದಿದ್ದ ಅವಾಂತರ ತಿಳಿದು ಏನೋ ಎಡವಟ್ಟಾಗಿದೆ ಎಂದೆನಿಸಿ, ತಕ್ಷಣ ಒಂದಷ್ಟು ಗ್ರಾಮಸ್ಥರನ್ನು ಗುಡ್ಡೆ ಹಾಕಿಕೊಂಡು ವಾಪಸ್ ಅದೇ ಜಾಗಕ್ಕೆ ಹೋಗಿ ನೋಡಲಾಗಿ ...ಅಲ್ಲಿತ್ತು ರಕ್ತಸಿಕ್ತ ಮಗುವಿನ ಮುಂಡ.
ಈ ಭಾಗದಲ್ಲಿ ಕರಡಿ ಮ್ತು ತೋಳಗಳ ಹಾವಳಿ ವಿಪರೀತವಾಗಿದೆ. ಕಳೆದ ವರ್ಷವೂ ಇಂಯಹುದೇ ಘಟನೆ ನಡೆದಿತ್ತು. ಆದರೆ ಅಂದು ಮಗುವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೆವು. ಆದರೆ ಇಂದು ಮಗು ಕೈತಪ್ಪಿ ಹೋಯಿತು ಎಂದು ಗ್ರಾಮದ ಹಿರಿಯೊಬ್ಬರು ಅಲವತ್ತುಕೊಂಡರು.
'ಅರಣ್ಯ ಇಲಾಖೆಗೆ ಇವುಗಳ ಹಾವಳಿ ಬಗ್ಗೆ ಸುದ್ದಿ ಮುಟಗ್ಟಿಸಿದ್ದರೂ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಈ ಕಡೆ ತಲೆ ಹಾಕಿಲ್ಲ. ಅಂದಹಾಗೆ ನಿನ್ನೆ ಗುಲ್ಬರ್ಗ ಗ್ರಾಮಾಂತರ ಠಾಣೆಯ ಪೊಲೀಸರು ನಮ್ಮ ಪುಣ್ಯಕ್ಕೆ ಸ್ಥಳಕ್ಕೆ ಬಂದು ಮಹಜರು ನಡೆಸಿ ಹೋದರು. ಅಷ್ಟೇ' ಎಂದು ಅವರು ವಿಷಾದದಿಂದ ಹೇಳಿದರು.
ರಾಜಧಾನಿಯಲ್ಲಿ ಮತ್ತೊಂದು ಮಗು ಗ್ರಿಲ್ ಗೆ ಬಲಿ:
ಬೆಂಗಳೂರು ವರದಿ: ಈ ರಾಜಧಾನಿ ಮಂಧಿ ಯಾಕೋ ಎಚ್ಚೆತ್ತುಕೊಳ್ಳುವ ಲಕ್ಷಣಗಳೇ ಇಲ್ಲ. ಒಂದೇ ವಾರದಲ್ಲಿ ಮತ್ತೊಂದು ಮಗು ಗ್ರಿಲ್ ಗೆ ಬಲಿಯಾಗಿದೆ. ಮಗು ಸತ್ತ ನಂತರ ಆ ಪೋಷಕರ ಗೋಳಾಟ ಮನಕರಗಿಸುತ್ತದೆ.
ಆದರೆ ತಾವು ತೋರುವ ದಿವ್ಯ ನಿರ್ಲಕ್ಷ್ಯದಿಂದಾಗಿಯೇ ಮಗು ನಮ್ಮ ಕಣ್ಣೆದುರಿಗೇ ಪ್ರಾಣ ನೀಗಿತು ಎಂಬುದು ಆ ಬೇಜವಾಬ್ದಾರಿ ಪೋಷಕರಿಗೆ ಅರಿವಾಗುವ ವೇಳೆಗೆ ಮಗುವಿನ ಪ್ರಾಣ ಹಾರಿಹೋಗಿರುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಬೇಜವಾಬ್ದಾರಿ ಪೋಷಕರೇ!
ಈ ಬಾರಿ, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೋನಪ್ಪನ ಅಗ್ರಹಾರದಲ್ಲಿ 14 ತಿಂಗಳ ಗಂಡು ಮಗುವೊಂದು ಮನೆಯ ಎರಡನೇ ಮಹಡಿಯಿಂದ ಗ್ರಿಲ್ ನಿಂದ ನುಸುಳಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಇಲ್ಲೂ ಅದೇ ಟೆಕ್ಕಿಗಳು ದುರ್ದೈವಿ ಮಕ್ಕಳ ಅಪ್ಪ-ಅಮ್ಮ. ಆಂಧ್ರಪ್ರದೇಶ ಮೂಲದ ಅಜಯ್ಕುಮಾರ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ತಾಯಿ ಗೀತಾಂಜಲಿ ಗೃಹಿಣಿ ಎಂದು ಪೊಲೀಸರು ಹೇಳಿದ್ದಾರೆ.
ಗೀತಾಂಜಲಿ ದಂಪತಿ ಆ. 18ರಂದು ಬೆಳಗ್ಗೆ 10.30ರಲ್ಲಿ ಮಗುವನ್ನು (ಸೂರ್ಯನ್ ಅಜಯ್) ಮನೆಯ ಒಳ ಭಾಗದಲ್ಲಿ ಆಟವಾಡಲು ಬಿಟ್ಟು, ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮನೆಯ ಮುಂಬಾಗಿಲು ತೆರೆದಿತ್ತು.
ಆಟವಾಡುತ್ತಾ ಮುಂಬಾಗಿಲು ದಾಟಿ ಒಳಗಿದ್ದ ಅಪ್ಪ-ಅಮ್ಮನಿಂದ ದೂರವಾಗಿ ಬಂದ ಮಗು, ಮನೆಯ ಪೋರ್ಟಿಕೋದಲ್ಲಿ ಅಳವಡಿಸಿದ್ದ ಕಬ್ಬಿಣದ ಸರಳುಗಳ (ಗ್ರಿಲ್) ನಡುವೆ ನುಸುಳಿ ಕೆಳಗೆ ಬಿದ್ದಿತ್ತು. ದುರ್ದೈವವೆಂದರೆ ಆ ಅಪ್ಪ-ಅಮ್ಮನಿಗೆ ಮಗು ಕೆಳಗೆ ಬಿದ್ದಿದ್ದು ಗೊತ್ತೇ ಆಗಿಲ್ಲ.
ಅಕ್ಕಪಕ್ಕದವರು ಬಂದು ಚೀರುತ್ತಿದ್ದ ಮಗುವನ್ನು ಆರೈಕೆ ಮಾಡಿದ್ದಾರೆ. ಆ ವೇಳೆಗೆ ನತದೃಷ್ಟ ಅಪ್ಪ-ಅಮ್ಮ ಕೆಳಗಿಳಿದು ಬಂದು ನೋಡಿದರೆ ಅದು ತಮ್ಮದೇ ಮಗು ಎಂದು ತಿಳಿದು ಗಾಬರಿಗೊಂಡಿದ್ದಾರೆ.
ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಗು ಗುರುವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications