ಐಶೂ ಸೌಂದರ್ಯದ ಲಾಭ ಪಡೆದ ಕಲ್ಯಾಣ್

ಆದರೆ, ಮದುವಣಗಿತ್ತಿ ಡ್ರೆಸ್ ನಲ್ಲಿರುವ ಐಶ್ವರ್ಯಾ ಅವರ ಫೋಟೊ ಹೊಸದೋ, ಹಳೆಯದೋ ಎಂಬ ಚರ್ಚೆ ನಡೆದಿದೆ. ಅದು ಹಾಗಿರಲಿ, ಐಶ್ವರ್ಯಾ ಅವರ ಸೌಂದರ್ಯಕ್ಕೆ ಚೆಂದದ ನಾಡು ಕೇರಳ ಮರುಳಾಗಿದೆ.
ಮದುವೆ, ಮಗು ಆದ ಮೇಲೆ ಐಶ್ವರ್ಯಾ ರೈ ಅವರ ಬ್ರಾಂಡ್ ಮೌಲ್ಯ ಕುಸಿತವಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಕಲ್ಯಾಣ್ ಜ್ಯುವೆಲ್ಲರೀಸ್ ಐಶ್ವರ್ಯಾ ಹಾಗೂ ಅವರ ಮಾವ ಬಿಗ್ ಬಿ ಅಮಿತಾಬ್ ಅವರನ್ನು ತನ್ನ ಸಂಸ್ಥೆಯ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಿಸಿ ಅಚ್ಚರಿ ಮೂಡಿಸಿತ್ತು.
ಕಲ್ಯಾಣ್ ಜುವೆಲ್ಲರಿ ಈ ನಡೆ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಐಶ್ವರ್ಯಾ ರೈ ಬಗ್ಗೆ ಇರುವ ಕ್ರೇಜ್ ಕಂಡು ಕಲ್ಯಾಣ್ ಸಂಸ್ಥೆ ಮೂಕವಿಸ್ಮಿತವಾಗಿದೆ. ಕೊಚ್ಚಿಯಲ್ಲಿ ಆಭರಣ ಮಳಿಗೆ ಉದ್ಘಾಟನೆಗೆ ಬಂದಿದ್ದ ಐಶ್ವರ್ಯಾ ರೈ ಅವರನ್ನು ಕಾರಿನಿಂದ ಮಳಿಗೆ ತನಕ ಕರೆದು ತರುವಷ್ಟರಲ್ಲಿ ಆಯೋಜಕರು ಸಾಕಷ್ಟು ಬೆವರು ಹರಿಸಬೇಕಾಯಿತು. ಅಬು ಸಂದೀಪ್ ವಿನ್ಯಾಸ ಲೆಹಂಗಾ ತೊಟ್ಟಿದ್ದ ಐಶ್ವರ್ಯಾ ಅವರ ಜೊತೆ ಮಲೆಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಐಶ್ವರ್ಯಾ ರೈ ಇರುವ ಕಲ್ಯಾಣ್ ಜಾಹೀರಾತು 4 ದಿನಗಳಲ್ಲಿ 2 ಲಕ್ಷ ವೀಕ್ಷಕರನ್ನು ಸೆಳೆದು ದಾಖಲೆ ಬರೆದಿರುವ ಖುಷಿಯಲ್ಲೇ ತ್ರಿಸ್ಸೂರ್ ಮೂಲದ ಕಲ್ಯಾಣ್ ಜುವೆಲ್ಲರಿ ಸಂಸ್ಥೆ 1000ಕ್ಕೂ ಅಧಿಕ ಕೋಟಿ ರು ಬಂಡವಾಳ ಹೂಡಿಕೆ ಮಾಡುವುದರ ಜೊತೆಗೆ 15 ಶೋ ರೂಮ್ ಆರಂಭಿಸುವುದಾಗಿ ಘೋಷಿಸಿದೆ.
ಮೊದಲ ಹಂತದಲ್ಲಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಮಳಿಗೆಗಳು ಅರಂಭವಾಗಲಿದೆ. ನಂತರ ವಾರಂಗಲ್, ಕುಕ್ಕಟ್ ಪಲ್ಲಿ(ಹೈದರಾಬಾದ್), ಕಾಂಚೀಪುರಂ, ಕಾಕಿನಾಡ ಹಾಗೂ ಅಹಮದಾಬಾದ್ ನಲ್ಲಿ ಮಳಿಗೆ ತೆರೆಯಲಾಗುತ್ತದೆ. ಮುಂದಿನ ಹಂತದಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೊಸ ಮಳಿಗೆಗಳು ಅರಂಭವಾಗಲಿದೆ. 2015ರ ವೇಳೆಗೆ 100ಕ್ಕೂ ಅಧ್ಕ ಹೊಸ ಶೋ ರೂಮ್ ಸೇರ್ಪಡೆಯಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 16,000 ಕೋಟಿ ರು ಆದಾಯದ ನಿರೀಕ್ಷೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ 9,473 ಕೋಟಿ ರು ಗಳಿಸಲಾಗಿತ್ತು. ಮೊದಲ ತ್ರೈಮಾಸಿಕದಲ್ಲಿ 2,915 ಕೋಟಿ ಮಾರಾಟ ದಾಖಲಿಸಲಾಗಿದೆ. ಪ್ರಸ್ತುತ ನಮ್ಮ ಸಂಸ್ಥೆ ಸುಮಾರು 7 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ಕಲ್ಯಾಣ್ ಜುವೆಲ್ಲರೀಸ್ ಸಂಸ್ಥೆ ಮುಖ್ಯಸ್ಥ ಟಿಎಸ್ ಕಲ್ಯಾಣ್ ರಾಮನ್ ಹೇಳಿದ್ದಾರೆ.
ಸುಮಾರು 100 ವರ್ಷ ಇತಿಹಾಸವುಳ್ಳ ಕಲ್ಯಾಣ್ ಜುವೆಲ್ಲರಿ ಸಂಸ್ಥೆಯ 20,000 ಚದರ ಅಡಿ ವಿಸ್ತೀರ್ಣದ 36ನೇ ಆಭರಣ ಮಳಿಗೆಯನ್ನು ಐಶ್ವರ್ಯಾ ರೈ ಬಚ್ಚನ್ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.












Click it and Unblock the Notifications