ಬರಪೀಡಿತ ಪ್ರದೇಶಕ್ಕೆ ಯಡಿಯೂರಪ್ಪ ಭೇಟಿ ಅಧಿಕೃತ
ಈ ಸಂಗತಿಯನ್ನು ಈಶ್ವರಪ್ಪನವರು ಯಡಿಯೂರಪ್ಪ ಮತ್ತು ರಾಜ್ಯದ ಪಕ್ಷ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಡನೆ ಚರ್ಚಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ಈ ಪ್ರವಾಸಕ್ಕೆ ಆಗಸ್ಟ್ 21ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡಲಿದ್ದಾರೆ.
ಈ ಪ್ರವಾಸ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಆ.21ರಂದು ತುಮಕೂರಿನಿಂದ ಆರಂಭವಾಗಲಿದೆ. ಇದು ಆ.31ರಂದು ಚಾಮರಾಜನಗರದಲ್ಲಿ ಕೊನೆಯಾಗಲಿದೆ ಎಂದು ಈಶ್ವರಪ್ಪ ಅವರು ತಿಳಿಸಿದರು. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಬರಪೀಡಿತ ಪ್ರದೇಶಗಳ ಭೇಟಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತಿತರ ಮಂತ್ರಿಗಳು ಭಾಗವಹಿಸುತ್ತಿದ್ದಾರೆ.
ಬರಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ನೀಡುತ್ತಿರುವ ಭೇಟಿಗೆ ಅನೇಕ ಅಪಸ್ವರಗಳು ಕೇಳಿಬಂದಿದ್ದವು. ಯಡಿಯೂರಪ್ಪನವರು ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ಬಿಜೆಪಿ ಹೈಕಮಾಂಡ್ ಈ ಪ್ರವಾಸಕ್ಕೆ ಅಧಿಕೃತ ಮುದ್ರೆಯೊತ್ತುತ್ತಾ ಎಂಬ ಪ್ರಶ್ನೆಗಳೂ ಮೂಡಿಬಂದಿದ್ದವು.
ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ್ದರೂ, ಬಿಜೆಪಿ ಹೈಕಮಾಂಡ್ ಸಾಕಷ್ಟು ನಿರ್ಬಂಧನೆಗಳನ್ನು ವಿಧಿಸಿತ್ತು. ಆದರೆ, ಆ ಎಲ್ಲ ಕಟ್ಟಳೆಗಳನ್ನು ಧಿಕ್ಕರಿಸಿ ಯಡಿಯೂರಪ್ಪನವರು ಪ್ರವಾಸಕ್ಕೆ ಸಿದ್ಧರಾಗಿದ್ದರು. ತುಮಕೂರಿನಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಪ್ರವಾಸ ಆರಂಭಿಸಲಿದ್ದಾರೆ.
ರಾಜ್ಯ ಭಾರೀ ಬರದ ಸಮಸ್ಯೆಯನ್ನು ಎದುರಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಈಗ ನೈತಿಕ ಧೈರ್ಯ ತುಂಬಬೇಕಾಗಿದೆ. ಅವರಿಗೆ ಅಗತ್ಯವಾದ ಪರಿಹಾರವನ್ನು ದೊರಕಿಸಿಕೊಡಬೇಕಾಗಿದೆ. ಸಂಕಷ್ಟಕ್ಕೀಡಾಗಿರುವ ರೈತರಿಗೆ ಧೈರ್ಯ ತುಂಬುವುದು ಈ ಪ್ರವಾಸದ ಪ್ರಮುಖ ಅಂಶ ಎಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ.