ರೈಲಿಂದ ತಳ್ಳಿ ಬೆಂಗಳೂರಿಂದ ಹೊರಟಿದ್ದ ಅಸ್ಸಾಮಿಯರ ಹತ್ಯೆ
ವಿಪರ್ಯಾಸದ ಸಂಗತಿಯೆಂದರೆ, ಬೆಂಗಳೂರು ಅಸ್ಸಾಂಗಿಂತ ಸುರಕ್ಷಿತ ಎಂದು ರಾಜ್ಯ ಸರಕಾರ, ಪೊಲೀಸ್ ಅಧಿಕಾರಿಗಳು, ಅನೇಕ ಸಂಸ್ಥೆಗಳು, ಸಾರ್ವಜನಿಕರು ಮನವರಿಕೆ ಮಾಡಿಕೊಟ್ಟಿದ್ದರೂ, ಮನವಿಯನ್ನು ಧಿಕ್ಕರಿಸಿ ಇವರೆಲ್ಲ ತಮ್ಮ ಬಂಧುಗಳನ್ನು ಭೇಟಿಯಾಗಲೆಂದು ಬೆಂಗಳೂರು ಬಿಟ್ಟು ತೆರಳುತ್ತಿದ್ದರು.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಇವರನ್ನು ಹತ್ಯೆ ಮಾಡಿದ ಯುವಕರ ಗುರುತನ್ನು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. ಅಸ್ಸಾಂಗೆ ಸೇರಿದ ಈ ಯುವಕರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಹತ್ಯೆಯಾಗಿರುವ ಯುವಕರ ಶವ ನ್ಯೂ ಜಲಪೈಗುರಿ ಬಳಿಯ ಬೆಲಕೋಬಾ ರೈಲ್ವೆ ಹಳಿಯ ಬಳಿ ದೊರೆತಿವೆ. ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಗಾಯಗೊಂಡಿರುವ ಓರ್ವ ಪ್ರಯಾಣಿಕನ ಪ್ರಕಾರ, ಅವರ ಸಾಮಾನುಗಳನ್ನೆಲ್ಲ ಅಪರಿಚಿತ ಯುವಕರು ಕಿತ್ತುಕೊಂಡರು ಮತ್ತು ಅವರನ್ನು ಹಿಗ್ಗಾಮುಗ್ಗಾ ಥಳಿಸಿ ವೇಗವಾಗಿ ಸಾಗುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದರು. ಗಾಯಾಳುಗಳನ್ನು ಉತ್ತರ ಬಂಗಾಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ನ್ಯೂ ಜಲಪೈಗುರಿ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಯುವಕರು ಪ್ರತಿಭಟಿಸಿದರು. ಇದರಿಂದಾಗಿ ಇತರ ರೈಲುಗಳ ಸಂಚಾರಕ್ಕೂ ವ್ಯತ್ಯಯವಾಯಿತು. ಹತ್ಯೆಗೀಡಾಗಿರುವ ಇಬ್ಬರ ಕುಟುಂಬಕ್ಕೆ 15 ಸಾವಿರ ರು. ಮತ್ತು ಗಾಯಗೊಂಡವರಿಗೆ 500 ರು. ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ.












Click it and Unblock the Notifications