ಸೋಮವಾರ ರಂಜಾನ್ : ಬೆಂಗಳೂರಲ್ಲಿ ಹೈ ಅಲರ್ಟ್

ರಂಜಾನ್ (ಈದ್-ಉಲ್-ಫಿತರ್) ದಿನ ಒಟ್ಟು 17 ಸಾವಿರಕ್ಕೂ ಹೆಚ್ಚು ಪೊಲೀಸರು ಇಡೀ ನಗರವನ್ನು ಕಟ್ಟೆಚ್ಚರಿಕೆಯಿಂದ ಕಾಯಲಿದ್ದಾರೆ. ರಂಜಾನ್ ದಿನ ಅಥವಾ ನಂತರ ಇಲ್ಲಿರುವ ಅಸ್ಸಾಂ ಯುವಕರನ್ನು ಕೊಲ್ಲುವುದಾಗಿ ಗಾಳಿಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಭಾನುವಾರ ತಿಳಿಸಿದರು.
ಒಟ್ಟು 3 ಸಿಆರ್ಪಿಎಫ್ (Central Reserve Police Force), 3 ಆರ್ಎಎಫ್ (Rapid Action Force), 25 ಕೆಎಸ್ಆರ್ಪಿ (Karnataka State Reserve Police) ತುಕುಡಿಗಳು ನಗರದಲ್ಲಿ ಗಸ್ತು ತಿರುಗಲಿವೆ. ಜೊತೆಗೆ 600 ಹೋಂ ಗಾರ್ಡ್ಗಳ ಸೇವೆಯನ್ನು ಪಡೆಯಲಾಗುತ್ತಿದೆ.
ಜನ ನಿಬಿಡ ಪ್ರದೇಶಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ಬೃಹತ್ ಅಂಗಡಿ ಸಮುಚ್ಚಯಗಳ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೆ, ಅಸ್ಸಾಂ ಯುವಕರು ಹೆಚ್ಚಿರುವ ಪ್ರದೇಶಗಳಲ್ಲಿಯೂ ಪೊಲೀಸರು ಹೆಚ್ಚಿನ ನಿಗಾವಹಿಸಲಿದ್ದಾರೆ. ರಂಜಾನ್ ದಿನ ಸಾರ್ವಜನಿಕ ರಜಾದಿನವಾಗಿದ್ದರೂ ಅನೇಕ ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸದೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಒಂದು ಅಂದಾಜಿನ ಪ್ರಕಾರ, 30 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರು ಈಗಾಗಲೆ ನಗರವನ್ನು ತೊರೆದು ಅಸ್ಸಾಂ ಸೇರಿದ್ದಾರೆ. ಬೆದರಿಕೆಯ ಹಿಂದೆ ಯಾವುದೇ ಸ್ಥಳೀಯರ ಕೈವಾಡವಿಲ್ಲ ಎಂದು ಮನವರಿಕೆಯಾಗುತ್ತಿದ್ದಂತೆ ಅನೇಕ ಯುವಕರು ಮತ್ತೆ ಬೆಂಗಳೂರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ ಎಂದೂ ತಿಳಿದುಬಂದಿದೆ.
ಪ್ರತಿವರ್ಷ ರಂಜಾನ್ ಬರುವುದು, ಅದನ್ನು ಅತ್ಯಂತ ಶಾಂತರೀತಿಯಿಂದ ಆಚರಿಸುವುದು ಬೆಂಗಳೂರಿನಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಈ ಬಾರಿ ರಂಜಾನ್ ಸಮಯದಲ್ಲಿ ಹಿಂಸಾತ್ಮಕ ಕೃತ್ಯಕ್ಕೆ ಇಳಿಯುವುದಾಗಿ ಅನಾಮಧೇಯ ಸಂದೇಶಗಳು ರವಾನೆಯಾಗಿದ್ದರಿಂದ ಈ ಬಾರಿ ಅತಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಸುಳ್ಳುಸುದ್ದಿ ಹಬ್ಬಿಸಿದ 16 ಜನರನ್ನು ಕೋರಮಂಗಲ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಈಗಾಗಲೆ ಬಂಧಿಸಲಾಗಿದೆ.
ಅಶೋಕ್ ಗಸ್ತು : ಈಗಾಗಲೆ ನಗರ ತೊರೆದಿರುವ ಯುವಕರ ಸಂಖ್ಯೆ, ನಗರದಲ್ಲಿ ಸದ್ಯಕ್ಕಿರುವ ಪರಿಸ್ಥಿತಿ ಮತ್ತು ಈವರೆಗೆ ಬಂಧಿಸಲಾಗಿರುವ ಶಂಕಿತ ಯುವಕರ ಬಗ್ಗೆ ಕೇಂದ್ರಕ್ಕೆ ವರದಿಯನ್ನು ಕಳಿಸಲಾಗಿದೆ. ಗೃಹ ಸಚಿವ ಆರ್ ಅಶೋಕ್ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ಅವರು ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಎರಡು ದಿನಗಳ ಕಾಲ ಗೃಹ ಸಚಿವ ಆರ್ ಅಶೋಕ್ ಅವರು ಇಡೀ ನಗರವನ್ನು ಹಗಲು ರಾತ್ರಿ ಗಸ್ತು ತಿರುಗಲಿದ್ದಾರೆ.












Click it and Unblock the Notifications