ರೈಲು ಸ್ಫೋಟಿಸಲು ಸಂಚು : ರಾಜ್ಯಾದ್ಯಂತ ಹೈಅಲರ್ಟ್

"ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಮೈಸೂರಿನಿಂದ ಹೊರಡುವ ರೈಲುಗಳಲ್ಲಿ ಬಾಂಬ್ ಇಟ್ಟು ಸ್ಫೋಟಿಸಲು ಶಂಕಿತ ಉಗ್ರರು ಸಂಚು ಹೂಡಬಹುದು ಎಂದು ದೆಹಲಿಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಮೈಸೂರಿನಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳು ಉಗ್ರರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ" ಎಂದು ರೈಲ್ವೆ ಇಲಾಖೆಯ ಡಿಐಜಿ ಬಿ. ಶ್ರೀಕಾಂತಪ್ಪ ಅವರು ಪತ್ರಕರ್ತರಿಗೆ ಸೋಮವಾರ ತಿಳಿಸಿದರು.
ಪ್ರಾದೇಶಿಕ ಭದ್ರತಾ ಆಯುಕ್ತರ ಸಹಕಾರದೊಂದಿಗೆ ನಗರದಲ್ಲಿರುವ ರೈಲು ಹಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಪೊಲೀಸರು ಇತರ ಭದ್ರತಾ ಕಾರ್ಯಗಳಲ್ಲಿ ನಿರತರಾಗಿರುವುದರ ದುರ್ಲಾಭ ಪಡೆದು ವಿಧ್ವಂಸಕ ಕೃತ್ಯ ಎಸಗಲು ಹುನ್ನಾರ ನಡೆಸುತ್ತಿದ್ದಾರೆ. ಅದನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಮತ್ತು ಮೈಸೂರು ನಡುವೆ ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಯಾವುದೇ ಅವಘಡ ಸಂಭವಿಸದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರನ್ನು ಹದ್ದಿನ ಕಣ್ಣಿಟ್ಟು ಗಮನಿಸಲಾಗುತ್ತಿದೆ. ಹಗಲು ರಾತ್ರಿ ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಯಾಣಿಕರ ಲಗೇಜುಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜನರು ಕೂಡ ಎಚ್ಚರದಿಂದಿದ್ದು, ಯಾವದೇ ಶಂಕಿತ ವಸ್ತು ಕಂಡುಬಂದಲ್ಲಿ ಅಥವಾ ಯಾರ ಮೇಲಾದರೂ ಅನುಮಾನ ಬಂದಲ್ಲಿ ಕೂಡಲೆ ಪೊಲೀಸರಿಗೆ ತಿಳಿಸಬೇಕಾಗಿದೆ ಶ್ರೀಕಾಂತಪ್ಪ ಅವರು ವಿನಂತಿಸಿಕೊಂಡಿದ್ದಾರೆ.












Click it and Unblock the Notifications