ಕಿರಣ್ ಕುಮಾರ್ ಗೆ ಕೊಕ್, ಸೋನಿಯಾಜೀ ಆರ್ಡರ್
ಉನ್ನತ ಮೂಲಗಳ ಪ್ರಕಾರ ಆಂಧ್ರಪ್ರದೇಶದಲ್ಲಿ ಸದ್ಯದಲ್ಲೇ ಬದಲಾವಣೆ ಗಾಳಿ ಬೀಸಲಿದೆ. ರಾಷ್ಟ್ರಪತಿ ಚುನಾವಣೆಗೂ ಮುನ್ನ ಬೀಸಿದ್ದ ಈ ಗಾಳಿಯನ್ನು ತಡೆ ಹಿಡಿಯಲಾಗಿತ್ತು. ಈಗ ಆಂಧ್ರಪದೇಶದ ಕಾಂಗ್ರೆಸ್ ಪುನರುತ್ಥಾನಕ್ಕೆ ಬದಲಾವಣೆಯೊಂದೇ ಮಾರ್ಗ ಎನ್ನಲಾಗಿದೆ.
ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಚಂಚಲಗುಡ ಜೈಲಿನಲ್ಲಿದ್ದರೂ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿರುವ ಜಗನ್ ಹಾಗೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಇದಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಆಂಧ್ರದಲ್ಲಿ ಕಾಂಗ್ರೆಸ್ ಏಳಿಗೆಗೆ ಬದಲಾವಣೆಯಾಗಬೇಕು ಎಂದು ನಂ.10, ಜನಪಥ್ ನಲ್ಲಿ ಸೋನಿಯಾಜೀ ಜೊತೆ ಆಂಧ್ರದ ಹಿರಿಯ ನಾಯಕರು ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್: ಕಿರಣ್ ಕುಮಾರ್ ಅವರ ಸ್ಥಾನಕ್ಕೆ ಈಗ ಪೈಪೋಟಿ ನಡೆಯುತ್ತಿದ್ದು, ಕಿರಣ್ ಸರ್ಕಾರದಲ್ಲಿ ಸಚಿವರಾಗಿರುವ ಜನಾ ರೆಡ್ಡಿ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದರೆ ಅವರ ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಶಾಸಕ ಶಶಿಧರ್ ರೆಡ್ಡಿ ಹಾಗೂ ಕನ್ನಾ ಲಕ್ಷ್ಮಿನಾರಾಯಣ ಅವರು ಸಹ ಸ್ಪರ್ಧಿಗಳಾಗಿದ್ದಾರೆ.
ಆಂಧ್ರದಲ್ಲಿ ಬದಲಾವಣೆ ಮಾಡುವುದು ಅಷ್ಟು ಸುಲಭವಾಗಿಲ್ಲ. ತೆಲಂಗಾಣದ ವಿವಾದ ಇನ್ನೂ ಬಗೆ ಹರಿದಿಲ್ಲ. ಜಗನ್ ರೆಡ್ಡಿ ಮಟ್ಟ ಹಾಕಲು ಸೂಕ್ತ ತಂತ್ರ ರೂಪಿಸಿಲ್ಲ. ಈ ನಡುವೆ ಆಂಧ್ರಪ್ರದೇಶದ ನಂತರ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಬದಾಲವಣೆಯತ್ತ ಕೂಡಾ ಸೋನಿಯಾ ಗಾಂಧಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಮುಂದಿನ ಚುನಾವಣೆ ಹೊತ್ತಿಗೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಹೊಸ ನಾಯಕರ ನೇತೃತ್ವದಲ್ಲಿ ಅಖಾಡಕ್ಕೆ ಇಳಿಯಲು ಕಾಂಗ್ರೆಸ್ ನಿರ್ಧರಿಸಿದೆ. ಸೋನಿಯಾ ಅವರು ಕೈಗೊಳ್ಳುವ ನಿರ್ಣಯದ ಮೇಲೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ.
ವೀರಪ್ಪ ಮೊಯ್ಲಿ ಸ್ಪಷ್ಟನೆ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಕ್ತಿಮೀರಿ ದುಡಿಯುತ್ತಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಉದ್ಬವವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಆದರೆ, ಪಕ್ಷ ಸಂಘಟನೆ ನಿಟ್ಟಿನಲ್ಲಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕರ ಬದಲಾವಣೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.