ಲಕ್ಷ್ಮೀ ಅರುಣಾ ರೆಡ್ಡಿಗೆ ಬಿಎಸ್ಆರ್ ಕಾಂಗ್ರೆಸ್ ಸಾರಥ್ಯ

ಅದು ನಿಜವೂ ಆಗಬಹುದು. ಏಕೆಂದರೆ ರೆಡ್ಡಿ ಸೋದರರ ಪಾಳಯದಲ್ಲಿ ಅನೇಕ ಮಂದಿ ಜೈಲಿನತ್ತ ಹೆಜ್ಜೆಹಾಕುವಾಗ 'ನಾನೊಬ್ಬನೇ ಅಲ್ಲ, ನನ್ನ ಹಿಂದೆ ಇನ್ನೂ ಇದ್ದಾರೆ' ಎಂದು 'ತಪ್ಪೊಪ್ಪಿಗೆ' ನೀಡುತ್ತಾ ಕೃಷ್ಣ ಜನ್ಮಸ್ಥಾನ ಸೇರಿಕೊಳ್ಳುತ್ತಿದ್ದಾರೆ. ಹಾಗಾಗಿ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡೇ ರೆಡ್ಡಿ ಸೋದರರು ಒಬ್ಬೊಬ್ಬರಾಗಿ ಜೈಲಿನತ್ತ ಹೆಜ್ಜೆಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಲಕ್ಷ್ಮೀ ಅರುಣಾ ಅವರ ಕೊರಳಿಗೆ ಪಕ್ಷದ ನೊಗ ಕಟ್ಟಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕುತೂಹಲದ ಸಂಗತಿಯೆಂದರೆ ಲಕ್ಷ್ಮೀ ಅರುಣಾ ಅವರೂ ಸಿಬಿಐಗೆ ಬೇಕಾದವರೆ. ಆದರೆ ಆ ಸಿಬಿಐನವರು ಕರ್ನಾಟಕದವರು ಎಂಬುದು ಗಮನಾರ್ಹ. ಏಕೆಂದರೆ ಅಸೋಸಿಯೆಟೆಡ್ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆಕೆಯದೂ ಪಾಲಿದೆ ಎಂದು ಖುದ್ದು ಸಿಬಿಐ ಹೇಳಿದೆ.
ಆದರೂ ಪ್ರಕರಣದ ಸೂತ್ರಧಾರ ಜನಾ ರೆಡ್ಡಿಯನ್ನು pt warrant ಮೇಲೆ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದು ಆತನಿಗೆ ವಿಶ್ರಮಿಸಿಕೊಳ್ಳಲು ಹೇಳಿದ್ದನ್ನು ಬಿಟ್ಟರೆ, ಪ್ರಕರಣದಲ್ಲಿ ಸಿಬಿಐ ಮತ್ತೇನೂ ಪ್ರಗತಿ ಸಾಧಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಜನಾ ರೆಡ್ಡಿ ಕುಟುಂಬದಲ್ಲಿ ಬಹುಶಃ ಜೈಲುಪಾಲಾಗದೆ ಉಳಿಯುವವರು ಈ ಲಕ್ಷ್ಮೀ ಅರುಣಾ ಒಬ್ಬರೇ ಅನಿಸುತ್ತಿದೆ. ಹಾಗಾಗಿ, ಆಕೆಯ ಹೆಗಲಿಗೆ ಪಕ್ಷದ ಸಾರಥ್ಯ.
ಕಾಡಲಿರುವ ಸುಗ್ಗಲಮ್ಮ: ಹಾಲಿ ಅಧಿನಾಯಕ ಶ್ರೀರಾಮುನನ್ನು ಈ ವಾರ ಬೇಲ್ ಡೀಲ್ ಪ್ರಕರಣದಲ್ಲಿ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳ (ACB) ಕರೆದುಕೊಂಡು ಹೋಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಒಂದು ವೇಳೆ ಅಕಸ್ಮಾತ್ ಈ ವಾರ ACB ನವರು ರಾಮುಲುನನ್ನು ಕರೆದುಕೊಂಡು ಹೋಗಲಿಲ್ಲವೆಂದರೂ ಮುಂದಿನ ದಿನಗಳಲ್ಲಿ ರಾಮುಲು ಜೈಲುಪಾಲಾಗುವುದು ಗ್ಯಾರಂಟಿ ಎಂಬ ಮಾತುಗಳು ಬಳ್ಳಾರಿ ಪೊಲೀಸ್ ವಲಯದಲ್ಲಿ ಗಟ್ಟಿಯಾಗಿ ಕೇಳಿಬಂದಿದೆ.
ಏಕೆಂದರೆ 2008ರ ಸೆಪ್ಟೆಂಬರಿನಲ್ಲಿ ಸುಗ್ಗಲಮ್ಮ ದೇವಸ್ಥಾನವನ್ನು ನೆಕ್ಕುರುಳಿಸಿ, ರೆಡ್ಡಿ ಕುಟುಂಬದವರು ತಮ್ಮ ಅವಸಾನ ತಂದಿಟ್ಟುಕೊಂಡಿದ್ದಾರೆ. ಆ ಪ್ರಕರಣದಲ್ಲಿ ರಾಮುಲು ಮತ್ತು ಕರುಣಾಕರ ರೆಡ್ಡಿ ಹೆಸರು ಎದ್ದುಕಾಣುತ್ತಿದೆ. ಈ ಹಂತದಲ್ಲಿ, ಮನಸ್ಸಿಲ್ಲದಿದ್ದರೂ ಕರುಣಾಕರ ರೆಡ್ಡಿ ತಮ್ಮನ ಕೈಹಿಡಿಯುತ್ತಾರೆ ಎಂಬ ದೂರದ ಆಸೆಯೂ ಕಮರಿದೆ.
ಮತದಾರನ ನಿಲುವುವೇನು?: ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ರಾಜಕೀಯ ಸಭೆಯಲ್ಲಿ ಢಾಳಾಗಿ ಓಡಾಡಿದ ಲಕ್ಷ್ಮೀ ಅರುಣಾ, ನಿನ್ನೆ ಭಾನುವಾರ ಬಳ್ಳಾರಿಯ ಹವಂಭಾವಿಯಲ್ಲಿನ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ನಡೆದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದು, ಪಕ್ಷದ ಮುಖಂಡರ ಬಂಧನದಿಂದ ಎದುರಾಗಿರುವ ಸಂಕಷ್ಟ ಸ್ಥಿತಿಯಲ್ಲಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಿರುವಂತೆ ಕಂಪ್ಲಿ, ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಸೋನಿಯಾ ಗಾಂಧಿ ರಾಜಕೀಯಕ್ಕೆ ಧುಮುಕಿ, ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ನಿಧನದ ನಂತರ ಅವರ ಪತ್ನಿ ರಾಜಕೀಯ ಪ್ರವೇಶಿಸಿ ಚುನಾವಣೆ ಎದುರಿಸಿದ್ದಾರೆ.
ಜಗನ್ಮೋಹನ ರೆಡ್ಡಿ ಅವರ ಬಂಧನದ ನಂತರ ಅವರ ಸೋದರಿ ಶರ್ಮಿಳಾ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷ ಮುನ್ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರಂತೆಯೇ ಕರ್ನಾಟಕದಲ್ಲೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯೊದಗಬಾರದೆಂದರೆ ಅರುಣಾ ಲಕ್ಷ್ಮೀ ಅವರು ಪಕ್ಷದ ಸಾರಥ್ಯ ವಹಿಸುವುದು ಬಹುಮುಖ್ಯವೆಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಮತದಾರ ಈಗಾಗಲೇ ರೆಡ್ಡಿಗಳ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಆ ನಿರ್ಧಾರವೇನೆಂಬುದು ಮತದಾನದ ದಿನ ಗೊತ್ತಾಗಲಿದೆ ಎಂದು ಬಳ್ಳಾರಿಯ ಹಿರಿಯ ರಾಜಕಾರಣಿಯೊಬ್ಬರು ಮತದಾರನ ನಾಡಿಮಿಡಿತದ ಬಗ್ಗೆ ಭಾಷ್ಯ ಬರೆದಿದ್ದಾರೆ.











Click it and Unblock the Notifications