ಜೆಪಿ ನಗರ ಜೋಡಿ ಕೊಲೆ, ಪ್ರಮುಖ ಆರೋಪಿ ಬಂಧನ
ಇದು ಮನೆಕೆಲಸದವರ ಕೃತ್ಯ ಇರಬಹುದು ಎಂದು ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿತ್ತು. ಅದರಂತೆ ಮನೆ ಕೆಲಸದ ನೆಪದಲ್ಲಿ ಬಂದು ದಂಪತಿಗಳ ದೈನಂದಿನ ಚಟುವಟಿಕೆ ಮೇಲೆ ನಿಗಾ ಇರಿಸಿದ ಗುರುಪ್ರಸಾದ್ ಈ ಕೊಲೆ ಮಾಡಿದ್ದಾನೆ.
ಈ ಕೃತ್ಯದ ಹಿಂದೆ ದೀಪ್ತಿ ಮತ್ತು ಪದ್ಮಾ ಎಂಬ ಮನೆಗೆಲಸದವರ ಮೇಲೂ ಶಂಕೆ ವ್ಯಕ್ತವಾಗಿದೆ. ಇಬ್ಬರಿಂದ ನಾಲ್ಕು ಜನ ಸೇರಿಕೊಂಡು ಯೋಜನೆ ಹಾಕಿಕೊಂಡು ಕೊಲೆ ಮಾಡಿದ್ದಾರೆ ಎಂದು ಜೆಪಿ ನಗರ ಪೊಲೀಸರು ಹೇಳಿದರು. ಆದರೆ, ಕೊಲೆಗಾರನ ವಿವರಗಳನ್ನು ಸಂಪೂರ್ಣವಾಗಿ ನೀಡಲು ನಿರಾಕರಿಸಿದರು.
ಆದರೆ, ಕೊಲೆಗೆ 300 ಗ್ರಾಂ ಚಿನ್ನ ಪ್ರಮುಖ ಕಾರಣವಾಗಿದೆ. ಚಿನ್ನ ಕದಿಯುವ ಆಸೆ ಹೊಂದಿದ್ದ ಪ್ಲಂಬರ್ ಗುರುಪ್ರಸಾದ್ ಗೆ ಮನೆಕೆಲಸದವರು ಸಾಥ್ ನೀಡಿದ್ದಾರೆ. ಕಳ್ಳತನಕ್ಕೆ ಪ್ರತಿರೋಧ ಒಡ್ಡಿದ್ದ ವೃದ್ಧ ದಂಪತಿಗಳು ದುರಂತ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರು.
ಜೆಪಿನಗರದ ಆಕ್ಸ್ ಫರ್ಡ್ ಶಾಲೆ ಬಳಿಯ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ದಂಪತಿಯ ಶವಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳಿಂದ ಹತ್ಯೆಯಾದವರನ್ನು ವೆಂಕಟೇಶಯ್ಯ(78) ಮತ್ತು ಸ್ವರ್ಣಾಂಬ(69) ಎಂದು ಗುರುತಿಸಲಾಗಿದೆ.
ಜೆಪಿ ನಗರದ ಒಂದನೇ ಹಂತದ ಆಕ್ಸ್ ಫರ್ಡ್ ಶಾಲೆ ಬಳಿಯ 10ನೇ ಬಿ ಅಡ್ಡರಸ್ತೆ ನಿವಾಸಿ ವೆಂಕಟೇಶಯ್ಯ (76) ಮತ್ತು ಅವರ ಪತ್ನಿ ಸ್ವರ್ಣಾಂಬ (68) ಅವರ ಕೊಲೆಯಾಗಿದ್ದರು. ದಂಪತಿ ಕೊಲೆ ನಡೆದು ಮೂರರಿಂದ ನಾಲ್ಕುದಿನಗಳು ಆಗಿರಬಹುದು ಎಂದು ಶಂಕಿಸಲಾಗಿತ್ತು.
ಶುಕ್ರವಾರ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಪಾದಚಾರಿಗಳು ನಡೆದು ಹೋಗುವಾಗ ವಾಸನೆ ಬಂದಿದ್ದರಿಂದ ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ ಆಗ ದಂಪತಿ ಶವಗಳು ಕಂಡಿವೆ. ಕೂಡಲೇ ಜೆಪಿ ನಗರ ಪೊಲೀಸರಿಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದು ಡಿಸಿಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದರು.
ದುಷ್ಕರ್ಮಿಗಳಿಂದ ಕೊಲೆಯಾಗಿರುವ ವೆಂಕಟೇಶಯ್ಯ ಶಿಕ್ಷಣ ಇಲಾಖೆಯಲ್ಲಿ ನಿವೃತ್ತ ಪ್ರಥಮ ದರ್ಜೆ ಗುಮಾಸ್ತರಾಗಿದ್ದು, ಜೆಪಿ ನಗರದ 1ನೇ ಹಂತದಲ್ಲಿರುವ 10ನೇ ಮೇನ್ ಆಕ್ಸ್ ಫರ್ಡ್ ಶಾಲೆ ಸಮೀಪ ಇರುವ ಮಡದಿ ಸ್ವರ್ಣಾಂಬ ಸಮೇತ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ.
ಅವರಿಗೆ ಎರಡು ಮನೆಗಳಿದ್ದು, ಒಂದನ್ನು ಬಾಡಿಗೆಗೆ ನೀಡಿ ಇನ್ನೊಂದರಲ್ಲಿ ವಾಸಿಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ತಲೆಗೆ ಹೊಡೆದು ಕೊಲೆ ಮಾಡಿರಬಹುದು ಎಂದು ಹೇಳಲಾಗಿದೆ.
ಹಣ, ಆಭರಣ ದೋಚಲೆಂದೇ ದಂಪತಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ವೈಯಕ್ತಿಕ ಅಥವಾ ಭೂ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.